ಉಳ್ಳಾಲ: ಕೊರೋನ ಸೋಂಕಿನಿಂದ ದಾವಣಗೆರೆಯ ವ್ಯಕ್ತಿ ಮೃತ್ಯು
ಉಳ್ಳಾಲ, ಜು.21: ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ದಾವಣಗೆರೆ ಮೂಲದ ಕೊರೋನ ಪೀಡಿತ ಹಿರಿಯ ರಾಜಕೀಯ ಮುಖಂಡರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ.
ದಾವಣಗೆರೆ ಕಾಂಗ್ರೆಸ್ನ ಉಪಾಧ್ಯಕ್ಷ, ಜಾಮಿಯಾ ಮಸೀದಿಯ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ 59 ವರ್ಷದ ಉದ್ಯಮಿಯೊಬ್ಬರು ಅನಾರೋಗ್ಯದಿಂದಾಗಿ 10 ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಅವರ ಗಂಟಲಿನ ದ್ರವ ಪರೀಕ್ಷೆ ಮಾಡಿಸಲಾಗಿದ್ದು ಇದರಿಂದ ಕೊರೋನ ಇರುವುದು ದೃಢಪಟ್ಟಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ.
ಅಂತ್ಯಕ್ರಿಯೆ: ಮೃತದೇಹವನ್ನು ದಾವಣಗೆರೆಗೆ ಕೊಂಡು ಹೋಗುವುದು ಕಷ್ಟದ ಪರಿಸ್ಥಿತಿ ಇರುವ ಕಾರಣ ಉಳ್ಳಾಲದಲ್ಲಿ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆ ಉಳ್ಳಾಲ ದರ್ಗಾದ ಕಬರ್ ಸ್ಥಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ದರ್ಗಾ ಆಡಳಿತ ಸಮಿತಿಯ ಸದಸ್ಯರು, ಹೆಲ್ಪ್ಇಂಡಿಯಾ ಫೌಂಡೇಶನ್ ಸಹಿತ ಕೆಲವು ಸಾಮಾಜಿಕ ಸಂಘಟನೆಗಳ ಸದಸ್ಯರು, ಉಳ್ಳಾಲ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಪಾಲ್ಗೊಂಡಿದ್ದರು.