ಮಂಜೇಶ್ವರ: ಪಿಕಪ್ನಲ್ಲಿ ಸಾಗಾಟ ಮಾಡುತ್ತಿದ್ದ ಒಂದು ಕ್ವಿಂಟಾಲ್ ಗಾಂಜಾ ವಶ
ಇಬ್ಬರು ಆರೋಪಿಗಳು ಪರಾರಿ
ಮಂಜೇಶ್ವರ, ಜು.21: ಪಿಕಪ್ನಲ್ಲಿ ಸಾಗಾಟ ಮಾಡುತ್ತಿದ್ದ ಒಂದು ಕ್ವಿಂಟಾಲ್ ಗಾಂಜಾವನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡ ಘಟನೆ ಮಂಗಳವಾರ ಸಂಜೆ ನಡೆದಿರುವುದಾಗಿ ವರದಿಯಾಗಿದೆ. ಈ ವೇಳೆ ಆರೋಪಿಗಳಿಬ್ಬರು ವಾಹನ ಬಿಟ್ಟು ಪರಾರಿಯಾಗಿದ್ದಾರೆ.
ಕುಂಜತ್ತೂರು ಪದವು ಬಳಿ ವಾಹನ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ಅದೇ ದಾರಿಯಾಗಿ ಬಂದ ಪಿಕಪ್ನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದ್ದು, ಇದರಂತೆ ನಿಲ್ಲಿಸಿದ್ದ ಪಿಕಪ್ನ್ನು ಪೊಲೀಸರು ತಪಾಸಣೆಗೆ ಸಮೀಪ ತಲುಪುವಷ್ಟರಲ್ಲಿ ಆರೋಪಿಗಳು ವಾಹನವನ್ನು ಚಲಾಯಿಸಿ ಪರಾರಿಯಾಗಲು ಯತ್ನಿಸಿದರೆನ್ನಲಾಗಿದೆ.
ಈ ವೇಳೆ ಪೊಲೀಸರು ಪಿಕಪ್ನ್ನು ಹಿಂಬಾಲಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ. ಪಿಕಪ್ನಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು ಒಂದು ಕ್ವಿಂಟಾಲ್ ಗಾಂಜಾ ಪತ್ತೆಯಾಗಿದೆ. ಪಿಕಪ್ನಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ. ವಾಹನಕ್ಕೆ ಅಳವಡಿಸಲಾಗಿದ್ದ ನಂಬರ್ ಪ್ಲೇಟ್ ನಕಲಿಯೆಂದು ಪೊಲೀಸರು ತಿಳಿಸಿದ್ದಾರೆ.
ಮಂಜೇಶ್ವರ ಪೊಲೀಸ್ ಠಾಣಾ ಹೆಚ್ಚುವರಿ ಸಬ್ಇನ್ಸ್ಪೆಕ್ಟರ್ ಬಾಲಚಂದ್ರನ್ ನೇತೃತ್ವದ ಪೊಲಿೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಈ ಬಗ್ಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.