ಉಡುಪಿ ಜಿಲ್ಲೆಯಲ್ಲಿ ಚೆಕ್ಪೋಸ್ಟ್ ಮುಂದುವರಿಕೆ: ಅನಗತ್ಯ ಓಡಾಟಕ್ಕೆ ಪೊಲೀಸರಿಂದ ಬ್ರೇಕ್
ಪಡುಬಿದ್ರಿ, ಜು.22: ಜಿಲ್ಲಾಡಳಿತ ಜಿಲ್ಲೆಯ ಗಡಿ ಸೀಲ್ಡೌನ್ನ್ನು ಹಿಂದೆಗೆದುಕೊಂಡಿದ್ದು, ಆದರೆ ಅನಗತ್ಯವಾಗಿ ಉಡುಪಿ ಜಿಲ್ಲೆಯ ಗಡಿ ಪ್ರವೇಶಕ್ಕೆ ಯತ್ನಿಸಿದವರನ್ನು ವಾಪಾಸು ಕಳುಹಿಸಿದ ಘಟನೆ ಬುಧವಾರ ಹೆಜಮಾಡಿಯಲ್ಲಿ ನಡೆದಿದೆ.
ಬುಧವಾರ ಬೆಳಗ್ಗೆ ಮಂಗಳೂರು ಕಡೆಯಿಂದ ಉಡುಪಿ ಜಿಲ್ಲೆ ಪ್ರವೇಶಿಸಲು ಮುಂದಾದ ಎಲ್ಲಾ ವಾಹನಗಳನ್ನು ಹೆಜಮಾಡಿ ಚೆಕ್ಪೋಸ್ಟ್ನಲ್ಲಿ ಪೊಲೀಸರು ತಡೆದು ದಾಖಲೆಗಳನ್ನು ಪರಿಶೀಲಿಸಿದರು. ಇದರಿಂದ ನೂರಾರು ವಾಹನ ಸವಾರರನ್ನು ಹೆಜಮಾಡಿ ಗಡಿ ತಪಾಸಣೆಯಲ್ಲಿ ತೊಡಗಿದ್ದ ಪೊಲೀಸರು ತಡೆದು ಹಿಂದಕ್ಕೆ ಕಳುಹಿಸಿದರು.
ಮುಖ್ಯಮಂತ್ರಿ ಹಾಗೂ ಉಡುಪಿ ಜಿಲ್ಲಾಧಿಕಾರಿಯವರೇ ಲಾಕ್ಡೌನ್ ಹಾಗೂ ಸೀಲ್ಡೌನ್ ತೆರವಾಗಿರುವ ಹೇಳಿಕೆ ನೀಡಿದ್ದಾರೆ ಎಂದು ಕೆಲ ವಾಹನ ಸವಾರರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
ಹೆಜಮಾಡಿಯಲ್ಲಿಯೇ ಕಾರ್ಯಾಚರಿಸುತ್ತಿರುವ ದಕ್ಷಿಣಕನ್ನಡ ಜಿಲ್ಲಾ ತಪಾಸಣಾ ಕೇಂದ್ರದಲ್ಲಿ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ನೀಡಿದ ಪರಿಣಾಮ, ಮೂಲ್ಕಿ, ಮಂಗಳೂರಿಗೆ ತೆರಳಿ ಹಿಂದಕ್ಕೆ ಬರುವಾಗ ಉಡುಪಿ ಜಿಲ್ಲೆ ಪ್ರವೇಶಕ್ಕೆ ವಾಹನಗಳರು ಹರಸಾಹಸ ಪಡಬೇಕಾಯಿತು.