ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿಎಂಗೆ ಡಿಕೆಶಿ ಪತ್ರ

ಬೆಂಗಳೂರು, ಜು.22: ಪ್ರಸ್ತುತ ಕೋವಿಡ್-19ರ ಪಿಡುಗಿನ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಅಪಾರವಾದದ್ದು. ತಮ್ಮ ಜೀವ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಸರಕಾರ ನಿರ್ಲಕ್ಷಿಸುತ್ತಿರುವುದು ನೋವಿನ ಸಂಗತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ವೇತನ ಹೆಚ್ಚಳ, ಬರಬೇಕಿರುವ ಬಾಕಿ ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯಾದ್ಯಂತ 42 ಸಾವಿರ ಆಶಾ ಕಾರ್ಯಕರ್ತೆಯರು ಕಳೆದ ಎರಡು ವಾರಗಳಿಂದ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಆದರೆ, ಅವರ ಕಷ್ಟ, ನೋವು ಕೇಳಲು ನೀವಾಗಲಿ, ನಿಮ್ಮ ಸಚಿವರಾಗಲಿ ಯಾರೂ ಅವರ ಬಳಿ ಹೋಗಿಲ್ಲ. ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳು ಹಲವು ಬಾರಿ ನನ್ನನ್ನು ಸಂಪರ್ಕ ಮಾಡಿ ತಮ್ಮ ನೋವು ವ್ಯಕ್ತಪಡಿಸಿದ್ದಾರೆ. ನಾನು ಪ್ರತಿಭಟನೆಯ ಸ್ಥಳಕ್ಕೆ ತೆರಳಿ ಅಹವಾಲು ಆಲಿಸಿದ್ದೇನೆ. ಆದರೆ, ಸರಕಾರ ಅವರ ಕಡೆ ತಿರುಗಿಯೂ ನೋಡದಿರುವುದು ವಿಷಾದದ ಸಂಗತಿ ಎಂದು ಅವರು ಹೇಳಿದ್ದಾರೆ.
ಆಶಾ ಕಾರ್ಯಕರ್ತೆಯರು ಕಳೆದ 12 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರ ಎರಡರಿಂದಲೂ ಒಟ್ಟು 6 ಸಾವಿರ ರೂ.ಪ್ರೋತ್ಸಾಹ ಧನ ಸಿಗುತ್ತಿದೆ. ಇದು ಈಗಿನ ಪರಿಸ್ಥಿತಿಯಲ್ಲಿ ಯಾವುದಕ್ಕೂ ಸಾಲುವುದಿಲ್ಲ. ಅಲ್ಲದೆ, ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಹಣ ಒಟ್ಟಿಗೆ ಬರುತ್ತಿಲ್ಲ ಎಂದು ಶಿವಕುಮಾರ್ ತಿಳಿಸಿದ್ದಾರೆ.
ಹೀಗಾಗಿ ಇವರಿಗೆ ಮಾಸಿಕ 12 ಸಾವಿರ ರೂ.ವೇತನ ನಿಗದಿ ಮಾಡಬೇಕು. ಸರಕಾರದಿಂದ ಬರಬೇಕಿರುವ ಬಾಕಿ ಹಣವನ್ನು ತಕ್ಷಣ ನೀಡಬೇಕು. ನೀವು ಘೋಷಣೆ ಮಾಡಿದ 3 ಸಾವಿರ ರೂ.ಪ್ರೋತ್ಸಾಹ ಧನ ಶೇ.10ರಷ್ಟು ಮಂದಿಗೂ ಸೇರಿಲ್ಲ. ಅದನ್ನೂ ಶೀಘ್ರವೆ ತಲುಪಿಸಬೇಕು. ಆಶಾ ಕಾರ್ಯಕರ್ತೆಯರಿಗೆ ಸುರಕ್ಷತಾ ಸಾಧನಗಳನ್ನು ನೀಡಬೇಕು ಮತ್ತು ಆರೋಗ್ಯ ವಿಮೆ ಮಾಡಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ನೀವೆ ಸಂಘಟನೆ ಪ್ರತಿನಿಧಿಗಳನ್ನು ಕರೆದು ಅವರ ಅಹವಾಲು ಕೇಳಬೇಕು ಹಾಗೂ ಅದಕ್ಕೆ ಸ್ಪಂದಿಸಬೇಕು ಎಂದು ಶಿವಕುಮಾರ್ ಆಗ್ರಹಿಸಿದ್ದಾರೆ.







