ಕೋವಿಡ್ ನಿರ್ವಹಣೆಗೆ ಕಾಂಗ್ರೆಸ್ನಿಂದ ಸಹಾಯವಾಣಿ: ರಮಾನಾಥ ರೈ
ಮಂಗಳೂರು, ಜು.23: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ವತಿಯಿಂದ ಸಹಾಯವಾಣಿ ಕೇಂದ್ರ ತೆರೆಯಲಾಗುತ್ತಿದ್ದು, ಇದರ ಮುಖ್ಯಸ್ಥರನ್ನಾಗಿ ಐವನ್ ಡಿಸೋಜ, ಕಚೇರಿಯಲ್ಲಿ ಕವಿತಾ ಸನಿಲ್ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ಗೆ ಪ್ರತ್ಯೇಕ ಆಸ್ಪತ್ರೆ ಬೇಕಾಗಿದೆ. ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅವರು ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲಿ. ಅದೇ ರೀತಿ ದಿನಬಳಕೆ ವಸ್ತುಗಳ ದರವೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಜನರು ಸಂಕಷ್ಟದಲ್ಲಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಆಗಬೇಕು ಎಂದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಇದು ಹೋರಾಟ ಮಾಡುವ ಸಮಯವಲ್ಲವಾದರೂ, ಸರಕಾರ ವೈಫಲ್ಯತೆ ಎತ್ತಿ ತೋರಿಸುವ ಜವಾಬ್ದಾರಿ ಪ್ರತಿಪಕ್ಷವಾಗಿ ನಮಗಿದೆ. ಸರಕಾರ ಕೋವಿಡ್ ಸಂಕಷ್ಟದಲ್ಲಿರುವವರಿಗೆ ಕಿಟ್ ವಿತರಿಸುವಲ್ಲಿ ವಿಫಲವಾಗಿದೆ. ಬಡವರು ಆಸ್ಪತ್ರೆಗೆ ಹೋದರೆ ಬೆಡ್ ಇಲ್ಲ. ಖಾಸಗಿ ಆಸ್ಪತ್ರೆಗಳ ಬಿಲ್ ಭರಿಸಲು ಸಾಧ್ಯವಾಗುತ್ತಿಲ್ಲ. ಪ್ರತಿಪಕ್ಷವಾಗಿ ನಾವು ನೀಡಿದ ಸಲಹೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸೋಂಕಿನ ಸಂಖ್ಯೆಯಲ್ಲಿ ಬೆಂಗಳೂರು ಮೊದಲನೇ ಸ್ಥಾನದಲ್ಲಿದ್ದರೆ, ದ.ಕ. ಎರಡನೇ ಸ್ಥಾನದಲ್ಲಿದೆ. ಆಡಳಿತ ನಿರ್ಲಕ್ಷ್ಯದಿಂದ ಜನತೆ ಭಯಭೀತರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಆಡಳಿತ ಪಕ್ಷಕ್ಕಿಂತ ಹೆಚ್ಚಾಗಿ ಜನರಿಗೆ ಸಹಾಯ ಮಾಡಿದೆ. ಬೆಂಗಳೂರಿನ ನಿರ್ವಹಣೆಗೆ 8 ಉಸ್ತುವಾರಿಗಳಿದ್ದು, ಅವರ ಮಧ್ಯೆ ಸಮನ್ವಯತೆಯಿಲ್ಲ ಎಂದು ಅವರು ಆರೋಪಿಸಿದರು.
ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಮಾತನಾಡಿ ಕೋವಿಡ್ ವರದಿಗಳ ಬಗ್ಗೆಯೇ ಸಂಶಯವಿದ್ದು, ಈ ಬಗ್ಗೆ ಜನರಿಗೆ ಮನದಟ್ಟು ಮಾಡಲಿ. ಯಾವ ಮೆಡಿಕಲ್ ಕಾಲೇಜಿನಲ್ಲಿ ಎಷ್ಟು ಬೆಡ್ಗಳು ಕೋವಿಡ್ ರೋಗಿಗಳಿಗೆ ಲಭ್ಯವಿದೆ ಎಂಬುವುದನ್ನು ಜಿಲ್ಲಾಡಳಿತ ಆನ್ಲೈನ್ ಮೂಲಕ ಸ್ಪಷ್ಟಪಡಿಸಲಿ. ಕೋವಿಡ್ ರೋಗಿಗಳು ತೀರಿಹೋದಾಗ ಗೌರವಯುತ ಅಂತ್ಯಸಂಸ್ಕಾರವಾಗುತ್ತಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕರಾದ ಮೊಯ್ದೀನ್ ಬಾವ, ಮಾಜಿ ಮೇಯರ್ಗಳಾದ ಶಶಿಧರ್ ಹೆಗ್ಡೆ, ಕವಿತಾ ಸನಿಲ್ ಮತ್ತಿತರರು ಉಪಸ್ಥಿತರಿದ್ದರು.
ಕೋವಿಡ್ ನಿಭಾಯಿಸುವಲ್ಲಿ ಸರಕಾರ ವಿಫಲ
ಸರಕಾರ ಕೋವಿಡ್ ನಿಭಾಯಿಸುವಲ್ಲಿ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿಯ ವಿಲವಾಗಿದೆ. ಬೆಂಗಳೂರಿನಲ್ಲಿ ನಿರ್ವಹಣೆಗೆ 8 ಮಂದಿಗೆ ಜವಾಬ್ದಾರಿ ನೀಡಲಾಗಿದ್ದು, ಒಬ್ಬರಿಗೊಬ್ಬರಿಗೆ ಸಮನ್ವಯತೆಯಿಲ್ಲ. ಇದು ಸರಕಾರದ ವೈಫಲ್ಯವನ್ನು ತೋರಿಸುತ್ತಿದೆ.
ಹರೀಶ್ ಕುಮಾರ್, ಅಧ್ಯಕ್ಷರು, ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ