ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಕೊಡಗಿನ ಕಾವೇರಿ ತೀರ್ಥ ಮತ್ತು ಮಣ್ಣು

ಮಡಿಕೇರಿ, ಜು.23: ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕೊಡಗಿನ ಕುಲದೇವತೆ ಕಾವೇರಿಯ ಪವಿತ್ರ ತೀರ್ಥ ಮತ್ತು ಕ್ಷೇತ್ರದ ಮಣ್ಣನ್ನು (ಮೃತ್ತಿಕೆ) ಸಂಗ್ರಹಿಸಿ ವಿಶೇಷ ಪೂಜೆ ನೆರವೇರಿಸಿ ಕಳುಹಿಸಿಕೊಡಲಾಯಿತು.
ಮುಂದಿನ ಆಗಸ್ಟ್ 5 ರಂದು ಉದ್ದೇಶಿತ ಶ್ರೀರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಅಯೋಧ್ಯೆಯಲ್ಲಿ ನೆರವೇರಲಿದೆ. ಈ ಹಿನ್ನೆಲೆ ರಾಷ್ಟ್ರ ಮತ್ತು ವಿಶ್ವದಾದ್ಯಂತದ ಪುನ್ಯ ಸ್ಥಳಗಳ ಮೃತ್ತಿಕೆಯನ್ನು ಸಂಗ್ರಹಿಸಿ ಅಯೋಧ್ಯೆಗೆ ಕಳುಹಿಸಿಕೊಡುವ ಕಾರ್ಯ ನಡೆಯುತ್ತಿದೆ.
ಉದ್ದೇಶಿತ ಭವ್ಯ ಮಂದಿರದ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕಳುಹಿಸಿಕೊಡುವ ಮೃತ್ತಿಕೆ ಮತ್ತು ಪವಿತ್ರ ತೀರ್ಥಕ್ಕೆ ಗುರುವಾರ ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣಾ ವೇದಿಕೆಯಿಂದ ತಲಕಾವೇರಿ ಕ್ಷೇತ್ರದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಪೂಜಾ ಕಾರ್ಯಕ್ರಮದ ಸಂದರ್ಭ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಪ್ರಮುಖರಾದ ನಾರಾಯಣ ಆಚಾರ್, ಚಿ.ನಾ. ಸೋಮೇಶ್ ಮತ್ತಿತರರು ಹಾಜರಿದ್ದರು.





