ತಂತ್ರಜ್ಞಾನದಲ್ಲಿ ಕನ್ನಡ ಬಳಸಿದರೆ ಕನ್ನಡದ ಅಸ್ಮಿತೆ ವಿಶ್ವಮಟ್ಟಕ್ಕೆ: ಟಿ.ಎಸ್.ನಾಗಾಭರಣ

ಬೆಂಗಳೂರು, ಜು.23: ತಂತ್ರಜ್ಞಾನದಲ್ಲಿ ಕನ್ನಡ ಬಳಕೆ ಮಾಡಿಕೊಂಡರೆ ಕನ್ನಡದ ಅಸ್ಮಿತೆಯು ವಿಶ್ವಮಟ್ಟದಲ್ಲಿ ಪಸರಿಸಲಿದೆ. ಈ ಕೆಲಸಗಳು ಮೊದಲು ಸರಕಾರಿ ಜಾಲತಾಣಗಳಿಂದ ಪ್ರಾರಂಭಿಸಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟಿದ್ದಾರೆ.
ಸರಕಾರಿ ಜಾಲತಾಣಗಳಲ್ಲಿ ಯುಆರ್ಎಲ್ ಬಳಸುವ ಸಂಬಂಧ ಭಾಷಾತಜ್ಞರು ಮತ್ತು ತಂತ್ರಜ್ಞರೊಂದಿಗೆ ಗುರುವಾರ ವಿಧಾನಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಜಾಲ ಸಂಪರ್ಕ ಸಭೆ ನಡೆಸಿದ ಅವರು, ಎಲ್ಲರಿಗೂ ಲಭ್ಯವಿರುವ ಕನ್ನಡ ಜಾಲತಾಣವನ್ನು ಸರಕಾರಿ ಇಲಾಖೆಗಳಲ್ಲಿ ಮೊದಲು ಅನುಷ್ಠಾನಗೊಳ್ಳಬೇಕಿದೆ ಎಂದರು.
ಸರಕಾರಿ ಜಾಲತಾಣಗಳಲ್ಲಿ ಯುಆರ್ಎಲ್ ಬಳಸುವ ಸಂಬಂಧ ಶೀಘ್ರದಲ್ಲಿಯೇ ನಿಯೋಗವೊಂದು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಜಾಲತಾಣವೇ ಅಲ್ಲ ಯು.ಆರ್.ಎಲ್ ಮತ್ತು ಇ-ಮೇಲ್ ಕೂಡ ಕನ್ನಡದಲ್ಲಿ ಇರಬೇಕು ಎಂದು ಮನವರಿಕೆ ಮಾಡಿಕೊಡಲಾಗುವುದು ಎಂದು ನಾಗಾಭರಣ ಹೇಳಿದರು.
ಈಗಾಗಲೇ ಡಾಟ್ ಭಾರತ ಎಂಬ ಹೆಸರಿನಲ್ಲಿ ಕನ್ನಡ ಜಾಲತಾಣವನ್ನು ನಿರ್ವಹಿಸಬಹುದಾದ ಅವಕಾಶವಿದ್ದು, ಅದನ್ನು ಡಾಟ್ ಕರ್ನಾಟಕ ಎಂದು ನೋಂದಣಿ ಮಾಡಬಹುದಾದ ಪೂರ್ವ ಸಿದ್ಧತೆಗಳು, ನೀತಿ-ನಿರೂಪಣೆಗಳು ಮತ್ತು ಸಾಧಕ ಬಾಧಕಗಳ ಹಾಗೂ ತಾಂತ್ರಿಕ ದೋಷಗಳ ಬಗ್ಗೆ ತಜ್ಞರೊಂದಿಗೆ ಚರ್ಚೆ ನಡೆಸಿ ಸರಕಾರದ ಎಲ್ಲ ಇಲಾಖೆಗಳಲ್ಲೂ ಅನುಷ್ಠಾನಗೊಳಿಸುವ ಬಗ್ಗೆ ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಡುವುದಾಗಿ ಅವರು ತಿಳಿಸಿದರು.
ತಂತ್ರಜ್ಞಾನ ಬೆಳೆದಂತೆ ಸರಕಾರದ ಆಡಳಿತ ಕೂಡ ಹೆಚ್ಚು ಹೆಚ್ಚು ಅದನ್ನು ಆಗು ಮಾಡಿಕೊಳ್ಳುವ ಮೂಲಕ ಸರಳೀಕರಣದ ಕಡೆಗೆ ಹೊರಳುತ್ತದೆ. ಪ್ರಾದೇಶಿಕ ಭಾಷೆಗಳು ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವಂತಾಗಬೇಕು. ಆಗಲೇ ಜನಾಡಳಿತ ಎಂಬುದು ನಿಜವಾಗಿಯೂ ಜನಭಾಷೆಯಲ್ಲಿ ಅಂದರೆ ಕನ್ನಡದಲ್ಲಿ ನಡೆಯಲು ಸಾಧ್ಯವಾಗಲಿದೆ ಎಂದು ನಾಗಾಭರಣ ತಿಳಿಸಿದರು.
ಸಭೆಯಲ್ಲಿ ಮುಖ್ಯಮಂತ್ರಿಯ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ, ಭಾಷಾಂತರ ಇಲಾಖೆ ನಿರ್ದೇಶಕಿ ಡಾ.ಡಿ.ಸ್ಮಿತಾ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಇ-ಆಡಳಿತದ ಯೋಜನಾ ನಿರ್ದೇಶಕ ಕೆ.ಎಸ್.ಶಿವರಾಮ್, ವೆಬ್ ಪೋರ್ಟಲ್ ಯೋಜನಾಧಿಕಾರಿ ಸತೀಶ್, ಇ-ಆಡಳಿತದ ಯೋಜನಾ ವ್ಯವಸ್ಥಾಪಕ ಪುಷ್ಪಾ, ಹಲ್ಮಿಡಿ ಕನ್ನಡ ಕೂಟದ ಜ್ಞಾನೇಶ್ವರ್, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ, ತಜ್ಞರಾದ ಡಾ.ಯು.ಬಿ.ಪವನಜ, ಶಂಕರ್ ಪ್ರಸಾದ್ ಮತ್ತಿತರರು ಉಪಸ್ಥತರಿದ್ದರು.







