ಫಲಿಮಾರಿನಲ್ಲಿ ಇನ್ನೂ ತೆರವಾಗದ ಸೀಲ್ಡೌನ್: ಸ್ಥಳೀಯರ ಅಸಮಾಧಾನ
ಹೆಜಮಾಡಿಯಲ್ಲಿ ಹೊರ ಜಿಲ್ಲೆ, ರಾಜ್ಯಗಳ ವಾಹನಗಳ ತಪಾಸಣೆ
ಪಡುಬಿದ್ರಿ: ಬುಧವಾರದಿಂದ ರಾಜ್ಯಾದ್ಯಂತ ಲಾಕ್ಡೌನ್ ತೆರವಾಗಿದ್ದರೂ, ಉಡುಪಿ ಜಿಲ್ಲಾಧಿಕಾರಿ ಆದೇಶದಂತೆ ಜಿಲ್ಲೆಯ ಎಲ್ಲಾ ಗಡಿ ಸೀಲ್ಡೌನ್ ಮುಂದುವರೆದಿದೆ. ಇದರಿಂದ ಸ್ಥಳೀಯ ನಿವಾಸಿಗಳು ಸಮಸ್ಯೆ ಅನುಭವಿಸಿದರು.
ಇಲ್ಲಿನ ಉಡುಪಿ ಜಿಲ್ಲೆಯ ಪಲಿಮಾರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕರ್ನಿರೆಯ ಗಡಿ ಪ್ರದೇಶವಾದ ಶಾಂಭವಿ ನದಿ ಸೇತುವೆ ಸಂಪರ್ಕ ರಸ್ತೆಯಲ್ಲಿ ಬ್ಯಾರಿಕೇಡ್ ಇಟ್ಟು ಸೀಲ್ಡೌನ್ ಮಾಡಿ ವಾಹನಗಳ ಸಂಚಾರಕ್ಕೆ ತಡೆವೊಡ್ಡಲಾಗಿತ್ತು. ಇದರಿಮದ ಪಲಿಮಾರನ್ನೇ ಆಶ್ರಯಿಸಿರುವ ಬಳ್ಕುಂಜೆ, ಕರ್ನಿರೆ ಭಾಗದ ಜನ ಸಾಮಾಗ್ರಿಗಳನ್ನು ಹೊತ್ತು ಅತ್ತಿಂದಿತ್ತ ಸಾಗುವಂತಾಗಿದೆ.
ಸೀಲ್ಡೌನ್ ತೆರೆವು ಮಾಡದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿರುವುದಲ್ಲದೆ, ಅನ್ಯ ಜಿಲ್ಲೆಗಳ ವಾಹನಗಳು ಈ ಮಾರ್ಗದಲ್ಲಿ ಸಂಚರಿಸಿದಂತೆ ಪೊಲೀಸ್ ಸಿಬಂದಿ ನಿಯೋಜಿಸಿ ತಪಾಸಣೆ ಮಾಡಿ ಸ್ಥಳೀಯ ವಾಹನಗಳಿಗೆ ಸಂಚಾರಕ್ಕೆ ಅವಕಾಶ ಮಾಡುವಂತೆ ಆಗ್ರಹಿಸಿದ್ದಾರೆ.
ಗುರುವಾರ ಬೆಳಗ್ಗಿನಿಂದಲೇ ನೂರಾರು ವಾಹನಗಳು ಈ ಮಾರ್ಗದಲ್ಲಿ ಆಗಮಿಸಿದೆ. ಅತ್ತಿಂದಿತ್ತ ಸಂಚರಿಸಲಾಗದೆ ಸಂಕಷ್ಟಪಡಬೇಕಾಯಿತು. ಅಗತ್ಯ ವಸ್ತುಗಳಿಗೆ ಸರಬರಾಜಿಗೂ ಇಲ್ಲಿ ಸಮಸ್ಯೆ ಉಂಟಾಗಿದೆ ಎಂದು ಕೆಲ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.
ಪಡುಬಿದ್ರಿ: ಹೆಜಮಾಡಿ ಗಡಿಯಲ್ಲಿ ಸೀಲ್ಡೌನ್ ಮುಂದುವರಿದಿದ್ದು, ಉಡುಪಿ, ದಕ್ಷಿಣಕನ್ನಡ ಜಿಲ್ಲೆ ನೋಂದಣಿ ವಾಹನಗಳ ಹೊರತು ಅನ್ಯ ಜಿಲ್ಲೆಗಳ ವಾಹನವನ್ನು ತಪಾಸಣೆ ನಡೆಸಲಾಗುತ್ತಿದೆ. ಕೋವಿಡ್-19 ಮಾರ್ಗಸೂಚಿಯನ್ನು ಗಾಳಿಗೆ ತೂರಿ ಅಧಿಕ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದ್ದ ಬಸ್ಗಳನ್ನು ಗಡಿಯಲ್ಲಿ ತಪಾಸಣೆ ನಡೆಸಿ, ಹೆಚ್ಚಿದ್ದ ಪ್ರಯಾಣಿಕರನ್ನು ಇಳಿಸಿ ಬೇರೊಂದು ಬಸ್ನಲ್ಲಿ ಸಂಚರಿಸಲು ಅನುವು ಮಾಡಲಾಯಿತು.
ಮುಂಬೈ ಸಹಿತ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ಅಧಿಕ ಸಂಖ್ಯೆಯ ವಾಹನಗಳು ಸಂಚರಿಸುತಿದ್ದು, ಇಂತಹ ವಾಹನಗಳನ್ನು ದಾಖಲೆ ಪರಿಶೀಲಿಸಿ ಸಂಚಾರಕ್ಕೆ ಅವಕಾಶ ನೀಡಲಾಯಿತು.