ಕೋವಿಡ್19: ರಾಜ್ಯದಲ್ಲಿಂದು 5 ಸಾವಿರಕ್ಕೂ ಹೆಚ್ಚು ಪಾಸಿಟಿವ್; 97 ಮಂದಿ ಸೋಂಕಿಗೆ ಬಲಿ
80 ಸಾವಿರ ಮೀರಿದ ಸೋಂಕಿತರ ಸಂಖ್ಯೆ; ಒಟ್ಟು 1,616 ಸಾವು

ಬೆಂಗಳೂರು, ಜು.23: ರಾಜ್ಯದಲ್ಲಿ ಕೆಲದಿನಗಳಿಂದ ಮಹಾಮಾರಿ ಕೊರೋನ ಸೋಂಕು ಆತಂಕಕಾರಿ ಸ್ಥಿತಿಯಲ್ಲಿ ಏರುತ್ತಿದೆ. ದೈನಂದಿನ ಪ್ರಕರಣಗಳಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು, ಇದೇ ಮೊದಲ ಬಾರಿಗೆ 5 ಸಾವಿರಕ್ಕೂ ಅಧಿಕ ಪ್ರಕರಣಗಳು ಒಂದೇ ದಿನದಲ್ಲಿ ಪತ್ತೆಯಾಗಿವೆ. ಒಟ್ಟಾರೆ ಸೋಂಕಿತರ ಸಂಖ್ಯೆ 80 ಸಾವಿರದ ಗಡಿ ದಾಟಿದೆ.
ಬುಧವಾರ ಸಂಜೆಯಿಂದ ಗುರುವಾರ ಸಂಜೆವರೆಗೆ ಮತ್ತೆ 5,030 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 80,863 ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 97 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 1,616ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 48 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಮೈಸೂರು 8, ದಕ್ಷಿಣ ಕನ್ನಡ 7, ಬಳ್ಳಾರಿ 5, ಬೆಳಗಾವಿ 4, ಬೀದರ್ 3, ಚಿಕ್ಕಬಳ್ಳಾಪುರ 3, ರಾಯಚೂರು, ಹಾಸನ, ಧಾರವಾಡ, ಗದಗ, ಚಿಕ್ಕಮಗಳೂರು, ಶಿವಮೊಗ್ಗ, ಮಂಡ್ಯ ಮತ್ತು ತುಮಕೂರು ಜಿಲ್ಲೆಯಲ್ಲಿ ತಲಾ 2, ಹಾವೇರಿ, ರಾಮನಗರ, ವಿಜಯಪುರ ಜಿಲ್ಲೆಯಲ್ಲಿ ತಲಾ ಒಂದು ಸಾವು ಸಂಭವಿಸಿದೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 2,207, ರಾಯಚೂರು 258, ಕಲಬುರಗಿ 229, ದಕ್ಷಿಣ ಕನ್ನಡ 218, ಬೆಳಗಾವಿ 214, ಧಾರವಾಡ 183, ಬಳ್ಳಾರಿ 164, ಬೆಂಗಳೂರು ಗ್ರಾಮಾಂತರ 161, ಉಡುಪಿ 160, ಮೈಸೂರು 116, ಹಾಸನ 108, ದಾವಣಗೆರೆ 107, ಬಾಗಲಕೋಟೆ 106, ಬೀದರ್ 94, ಉತ್ತರ ಕನ್ನಡ 83, ಶಿವಮೊಗ್ಗ 82, ಗದಗ 72, ಚಿಕ್ಕಬಳ್ಳಾಪುರ 65, ಚಿಕ್ಕಮಗಳೂರು 62, ತುಮಕೂರು 56, ಯಾದಗಿರಿ 55, ಮಂಡ್ಯ 50, ಕೋಲಾರ 40, ಚಾಮರಾಜನಗರ 27, ರಾಮನಗರ 26, ಕೊಡಗು 22, ವಿಜಯಪುರ 20, ಹಾವೇರಿ 18, ಕೊಪ್ಪಳ 17, ಚಿತ್ರದುರ್ಗದಲ್ಲಿ 10 ಪ್ರಕರಣ ಪಾಸಿಟಿವ್ ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ 80,863 ಕೊರೋನ ಸೋಂಕಿತರ ಪೈಕಿ 29,310 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 2,071 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 1,616 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 49,931 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.








