ಸೆಂಟ್ರಲ್ ಮಾರುಕಟ್ಟೆ: ಹೊಸ ಕಟ್ಟಡ ನಿರ್ಮಾಣಕ್ಕೆ ಹೈಕೋರ್ಟ್ ಮಧ್ಯಂತರ ಆದೇಶ ಅಡ್ಡಿ
ಮಂಗಳೂರು: ಕೊರೋನ-ಲಾಕ್ಡೌನ್ ಸಂದರ್ಭ ಸುರಕ್ಷಿತ ಅಂತರದ ನೆಪವೊಡ್ಡಿ ತರಾತುರಿಯಲ್ಲಿ ನಗರದ ಸೆಂಟ್ರಲ್ ಮಾರ್ಕೆಟ್ನ್ನು ಮುಚ್ಚಿ ಅಲ್ಲಿನ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ತಳ್ಳಿದ ಮಂಗಳೂರು ಮಹಾನಗರ ಪಾಲಿಕೆಗೆ ರಾಜ್ಯ ಹೈಕೋರ್ಟ್ನ ಮಧ್ಯಂತರ ಆದೇಶ ತಲೆನೋವಾಗಿ ಪರಿಣಮಿಸಿದೆ. ಅಂದರೆ ಹೈಕೋರ್ಟ್ನ ಅಂತಿಮ ಆದೇಶ ಬಾರದ ಹೊರತು ಇನ್ನು ಅಲ್ಲೀಗ ಹೊಸ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ಸ್ಮಾರ್ಟ್ಸಿಟಿ ಯೋಜನೆಯಡಿ ಸೆಂಟ್ರಲ್ ಮಾರುಕಟ್ಟೆಯನ್ನು ಕೆಡವಿ ಅಲ್ಲಿ ಹೊಸ ಮಾರುಕಟ್ಟೆ ಕಟ್ಟಡ ನಿರ್ಮಿಸುವ ಸಿದ್ಧತೆ ನಡೆದಿತ್ತು. ಅದಕ್ಕಾಗಿ ಸೆಂಟ್ರಲ್ ಮಾರುಕಟ್ಟೆಯ ವ್ಯಾಪಾರಿಗಳನ್ನು ವಿರೋಧದ ಮಧ್ಯೆಯೂ ಬೈಕಂಪಾಡಿಯ ಎಪಿಎಂಸಿಗೆ ಸ್ಥಳಾಂತರಿಸಲಾಗಿತ್ತು. ಅಲ್ಲದೆ ಚಿಲ್ಲರೆ ವ್ಯಾಪಾರಿಗಳಿಗೆ ನಗರದ ಲೇಡಿಗೋಶನ್, ಪುರಭವನ ಸಮೀಪ ಸುಮಾರು 500ರಷ್ಟು ಶೆಲ್ಟರ್ಗಳನ್ನು ನಿರ್ಮಿಸಲಾಗಿತ್ತು. ಈ ಮಧ್ಯೆ ಸೆಂಟ್ರಲ್ ಮಾರುಕಟ್ಟೆಯನ್ನು ತೊರೆದ ಚಿಲ್ಲರೆ ವ್ಯಾಪಾರಿಗಳಿಗೆ ನಗರದ ನೆಹರೂ ಮೈದಾನದ ುಟ್ಬಾಲ್ ಗ್ರೌಂಡ್ ಬಳಿ ತಾತ್ಕಾಲಿಕ ಮಾರುಕಟ್ಟೆ ಕಟ್ಟಡ ನಿರ್ಮಿಸುವ ಯೋಜನೆಯನ್ನೂ ರೂಪಿಸಲಾಗಿತ್ತು. ಆದರೆ ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಮತ್ತು ಕೆಲವು ವ್ಯಾಪಾರಿಗಳು ಪ್ರತ್ಯೇಕವಾಗಿ ಹೈಕೋರ್ಟ್ ಮೆಟ್ಟ್ಟಿಲೇರಿದ ಪರಿಣಾಮ ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗೆ ಸದ್ಯ ತಡೆ ಬಿದ್ದಿದೆ. ಅಂದರೆ ಸೆಂಟ್ರಲ್ ಮಾರ್ಕೆಟ್ನ ಹಳೆಯ ಕಟ್ಟಡವನ್ನು ಕೆಡಹುವ ವಿರುದ್ಧ ಮತ್ತು ಫುಟ್ಬಾಲ್ ಗ್ರೌಂಡ್ ಬಳಿ ತಾತ್ಕಾಲಿಕ ಮಾರುಕಟ್ಟೆ ಕಟ್ಟಡ ನಿರ್ಮಾಣ ಮಾಡುವ ಕಾಮಗಾರಿಯ ವಿರುದ್ಧ ಹೈಕೋರ್ಟ್ ತಡೆಯಾಜ್ಞೆ ನೀಡಿ ಯಥಾಸ್ಥಿತಿ ಕಾಪಾಡಲು ಸೂಚಿಸಿದೆ. ಹೈಕೋರ್ಟ್ನ ಈ ಆದೇಶವನ್ನು ತೆರವುಗೊಳಿಸದ ಹೊರತು ಮನಪಾಕ್ಕೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲವಾಗಿದೆ.
ಕೊರೋನ ನೆಪ: ಕೋವಿಡ್-19 ನಿಯಂತ್ರಣದ ನೆಪವಾಗಿಸಿಕೊಂಡ ಜಿಲ್ಲಾಡಳಿತ ಮತ್ತು ಮನಪಾವು ನಗರದ ಸೆಂಟ್ರಲ್ ಮಾರುಕಟ್ಟೆಯಲ್ಲಿ ಜನಸಂದಣಿಯಿಂದ ಸುರಕ್ಷಿತ ಅಂತರ ಅಸಾಧ್ಯ ಎಂದು ಹೇಳಿಕೊಂಡು ಸೆಂಟ್ರಲ್ ಮಾರುಕಟ್ಟೆಯ ಸಗಟು ವ್ಯಾಪಾರಿಗಳನ್ನು ಎಪ್ರಿಲ್ 4ರಂದು ಬೈಕಂಪಾಡಿ ಎಪಿಎಂಸಿ ಯಾರ್ಡ್ಗೆ ಸ್ಥಳಾಂತರಿಸಿತ್ತು. ಅಲ್ಲದೆ ವ್ಯಾಪಾರಿಗಳಿಗೆ ನಗರದ ನೆಹರೂ ಮೈದಾನದ ಫುಟ್ಬಾಲ್ ಗ್ರೌಂಡ್ನಲ್ಲಿ 4 ತಿಂಗಳೊಳಗೆ ತಾತ್ಕಾಲಿಕ ಮಾರುಕಟ್ಟೆ ನಿರ್ಮಿಸಿಕೊಡುವುದಾಗಿ ಆಶ್ವಾಸನೆ ನೀಡಲಾಗಿತ್ತು.
ಅದರಂತೆ ಫುಟ್ಬಾಲ್ ಗ್ರೌಂಡ್ ಬಳಿಯ 1.65 ಎಕರೆ ಜಮೀನಿನಲ್ಲಿ 5.82 ಕೋ.ರೂ. ವೆಚ್ಚದಲ್ಲಿ ತಾತ್ಕಾಲಿಕ ಮಾರುಕಟ್ಟೆ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಕಾಮಗಾರಿಯನ್ನು ಕೂಡ ಆರಂಭಿಸಲಾಗಿತ್ತು. ಈ ಮಧ್ಯೆ ಸೆಂಟ್ರಲ್ ಮಾರುಕಟ್ಟೆಯ 11 ವ್ಯಾಪಾರಿಗಳು ಇದರ ವಿರುದ್ಧ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆ ಹೂಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಜೂ.18ರಂದು ತಾತ್ಕಾಲಿಕ ಮಾರ್ಕೆಟ್ ನಿರ್ಮಾಣ ಕಾಮಗಾರಿಗೆ ತಡೆಯಾಜ್ಞೆ ತಂದಿತ್ತು. ಹಾಗಾಗಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ ಸೆಂಟ್ರಲ್ಮಾರುಕಟ್ಟೆಯ ಈಗಿರುವ ಕಟ್ಟಡವನ್ನು ಕೆಡಹುವ ವಿರುದ್ಧವೂ ಕೆಲವು ವ್ಯಾಪಾರಿಗಳು ಹೈಕೋರ್ಟಿನಿಂದ ತಡೆಯಾಜ್ಞೆ ತಂದಿದ್ದರು.
ಇವೆಲ್ಲದರ ಮಧ್ಯೆ ಬೈಕಂಪಾಡಿಯ ಎಪಿಎಂಸಿಯಲ್ಲಿ ವ್ಯಾಪಾರ ನಡೆಸಲಾಗದೆ ಪರಿತಪಿಸಿದ ಸೆಂಟ್ರಲ್ ಮಾರುಕಟ್ಟೆಯ ಚಿಲ್ಲರೆ ವ್ಯಾಪಾರಿಗಳು ಮೇ 6ರಂದು ಸೆಂಟ್ರಲ್ ಮಾರುಕಟ್ಟೆಯನ್ನು ಬಲವಂತವಾಗಿ ಪ್ರವೇಶಿಸಲು ಮುಂದಾಗಿದ್ದರು. ಹಾಗಾಗಿ ಮನಪಾ ಲೇಡಿಗೋಶನ್ ಆಸ್ಪತ್ರೆಯ ಎದುರು, ಟೆಂಪೊ ಸ್ಟ್ಯಾಂಡ್ ಬಳಿ, ಪುರಭವನದ ಸುತ್ತಮುತ್ತ ಸುಮಾರು 500ಕ್ಕೂ ಅಧಿಕ ತಾತ್ಕಾಲಿಕ ಶೆಲ್ಟರ್ಗಳನ್ನು ನಿರ್ಮಿಸಿ ವ್ಯಾಪಾರ ಮಾಡಲು ಸೂಚಿಸಿತ್ತು. ಆದರೆ ಅದು ತಮಗೆ ವ್ಯಾಪಾರ ಮಾಡಲು ಸೂಕ್ತವಲ್ಲ, ನಮ್ಮ ಸಾಮಗ್ರಿಗಳಿಗೆ ಅಲ್ಲಿ ಭದ್ರತೆಯಿಲ್ಲ ಎಂದು ಹೇಳಿಕೊಂಡು ಚಿಲ್ಲರೆ ವ್ಯಾಪಾರಿಗಳು ವ್ಯಾಪಾರ ಮಾಡಲು ಹಿಂಜರಿದಿದ್ದಾರೆ. ಒಟ್ಟಿನಲ್ಲಿ ಸೆಂಟ್ರಲ್ ಮಾರುಕಟ್ಟೆಯ ಹಳೆಯ ಕಟ್ಟಡ ಕೆಡವಿ ಹೊಸತು ಕಟ್ಟುವ ಪ್ರಯತ್ನಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿರುವುದು ಹೊಸ ಸಮಸ್ಯೆಯನ್ನು ಹುಟ್ಟು ಹಾಕಿದೆ. ಅತ್ತ ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಸ ಮಾರುಕಟ್ಟೆ ನಿರ್ಮಿಸಲೂ ಆಗದೆ, ಇತ್ತ ನೆಹರೂ ಮೈದಾನದ ಬಳಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಿಸಲೂ ಆಗದೆ ಮನಪಾ ಅಡಕತ್ತರಿಗೆ ಸಿಲುಕಿದೆ.
ಪ್ರಕರಣ ನ್ಯಾಯಾಲಯದಲ್ಲಿ ರುವುದರಿಂದ ಈಗ ಯಾವುದೇ ಕಾಮಗಾರಿ ಅಥವಾ ನಿರ್ಧಾರ ಕೈಗೊಳ್ಳುವಂತಿಲ್ಲ. ಯಥಾಸ್ಥಿತಿ ಕಾಪಾಡುವುದು ಅನಿವಾರ್ಯವಾಗಿದೆ. ಆದಾಗ್ಯೂ ತಡೆಯಾಜ್ಞೆ ತೆರವುಗೊಳಿಸಲು ಪ್ರಯತ್ನ ನಡೆಸಲಾಗುತ್ತಿದೆ. ಹೈಕೋರ್ಟ್ ತೀರ್ಪು ಬಂದ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು.
- ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಆಯುಕ್ತ, ಮಂಗಳೂರು ಮನಪಾ