ವಿಧಾನಪರಿಷತ್ ಗೆ ನಾಮನಿರ್ದೇಶನಗೊಂಡ ಶಾಂತಾರಾಮ್ ಸಿದ್ದಿ ಜನಾಂಗದ ಪ್ರಪ್ರಥಮ ಶಾಸಕ
![ವಿಧಾನಪರಿಷತ್ ಗೆ ನಾಮನಿರ್ದೇಶನಗೊಂಡ ಶಾಂತಾರಾಮ್ ಸಿದ್ದಿ ಜನಾಂಗದ ಪ್ರಪ್ರಥಮ ಶಾಸಕ ವಿಧಾನಪರಿಷತ್ ಗೆ ನಾಮನಿರ್ದೇಶನಗೊಂಡ ಶಾಂತಾರಾಮ್ ಸಿದ್ದಿ ಜನಾಂಗದ ಪ್ರಪ್ರಥಮ ಶಾಸಕ](https://www.varthabharati.in/sites/default/files/images/articles/2020/07/24/252296-1595589993.jpg)
ಬೆಂಗಳೂರು: ರಾಜ್ಯ ಬಿಜೆಪಿ ಸರಕಾರದಿಂದ ವಿಧಾನಪರಿಷತ್ ಗೆ ನಾಮನಿರ್ದೇಶನಗೊಂಡ ಐದು ಮಂದಿ ಹೊಸ ಸದಸ್ಯರ ಪೈಕಿ ಶಾಂತಾರಾಮ್ ಬುಡ್ನ ಸಿದ್ದಿ ಕೂಡ ಒಬ್ಬರಾಗಿದ್ದು, ಸಿದ್ದಿ ಬುಡಕಟ್ಟು ಸಮುದಾಯಕ್ಕೆ ಸೇರಿರುವ ಇವರು ತಮ್ಮ ಸಮುದಾಯದಿಂದ ಆಯ್ಕೆಗೊಂಡ ದೇಶದ ಪ್ರಥಮ ಶಾಸಕರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸಿದ್ದಿ ಜನಾಂಗದವರು ಆಗ್ನೇಯ ಆಫ್ರಿಕಾದಲ್ಲಿ ನೆಲೆಸಿರುವ ಬಂಟು ಸಮುದಾಯದ ವಂಶಸ್ಥರೆಂದೇ ನಂಬಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹಿತ್ಲಳ್ಳಿ ಗ್ರಾಮದವರಾದ ಶಾಂತಾರಾಮ್ ಅವರ ವಯಸ್ಸು 55 ಆಗಿದ್ದು ಪದವಿ ಶಿಕ್ಷಣ ಪೂರೈಸಿರುವ ತಮ್ಮ ಸಮುದಾಯದ ಪ್ರಥಮ ವ್ಯಕ್ತಿಯೂ ಅವರಾಗಿದ್ದಾರೆ. ಶಾಂತಾರಾಮ್ ಅವರು ಕಾರವಾರದ ಕಾಲೇಜಿನಿಂದ ಬಿಎ ಪದವಿ ಪಡೆದಿದ್ದಾರೆ.
ಅವರು ವನವಾಸಿ ಕಲ್ಯಾಣಾಶ್ರಮ ಎಂಬ ಹೆಸರಿನ ಎನ್ ಜಿಒ ಮೂಲಕ ಬುಡಕಟ್ಟು ಹೋರಾಟಗಾರರಾಗಿದ್ದಾರೆ. ಅಪ್ಪಿಕೋ ಚಳುವಳಿಯಲ್ಲೂ ಸಕ್ರಿಯರಾಗಿದ್ದ ಶಾಂತಾರಾಂ ಅವರು ತಾವು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಬಹುದೆಂದು ಯಾವತ್ತೂ ಎಣಿಸಿರಲಿಲ್ಲ. ಆದರೆ ತಮಗೆ ಈ ಸ್ಥಾನ ದೊರಕಿದ್ದು ಹಾಗೂ ರಾಜ್ಯ ಸರಕಾರ ತಮ್ಮ ಸಮುದಾಯಕ್ಕೆ ಮನ್ನಣೆ ನೀಡಿ ಪ್ರಾತಿನಿಧ್ಯ ಒದಗಿಸಿರುವುದು ಅವರಿಗೆ ಖುಷಿ ನೀಡಿದೆ.
ತಾವು ಕಳೆದ ಎರಡು ದಶಕಗಳಿಂದ ಹೋರಾಟ ನಡೆಸುತ್ತಿರುವ ಹಾದಿಯಲ್ಲಿಯೇ ಶಾಸಕನಾಗಿ ಸಿದ್ದಿ ಜನಾಂಗ ಸಹಿತ ಇತರ ಬುಡಕಟ್ಟು ಸಮುದಾಯಗಳ ಶ್ರೇಯೋಭಿವೃದ್ಧಿಯೇ ತನ್ನ ಪ್ರಥಮ ಆದ್ಯತೆ ಎಂದು ಅವರು ಹೇಳುತ್ತಾರೆ.
ಶಾಂತಾರಾಮ್ ತಮ್ಮ ಕಾಲೇಜು ದಿನಗಳಿಂದಲೇ ಆರೆಸ್ಸೆಸ್ ಸದಸ್ಯರೂ ಆಗಿದ್ದಾರೆ. “ರಾಜಕೀಯ ನನಗೆ ಹೊಸತು, ಆದರೆ ಸಾಮಾಜಿಕ ಕಾರ್ಯಕರ್ತನಾಗಿ ನನಗಿರುವ ಅನುಭವ ವಿಧಾನಪರಿಷತ್ ಸದಸ್ಯನಾಗಿ ಸಹಾಯಕವಾಗಲಿದೆ'' ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.