ಉಡುಪಿ: ಕೋವಿಡ್ ನಿಯಂತ್ರಣಕ್ಕೆ ವಿಶೇಷ ದಂಡಾಧಿಕಾರಿಗಳ ನೇಮಕ
ಉಡುಪಿ, ಜು.24: ಕೋವಿಡ್-19 ನಿಯಂತ್ರಣದ ಕುರಿತಂತೆ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಲವು ಅಧಿಕಾರಿಗಳನ್ನು ತಾತ್ಕಾಲಿಕವಾಗಿ ಕೋವಿಡ್-19 ಪ್ರಕ್ರಿಯೆ ಮುಕ್ತಾಯಗೊಳ್ಳುವರೆಗೆ ತಾಲೂಕುಗಳಿಗೆ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು (ಎಸ್ಇಎಂ) ನೇಮಕ ಮಾಡಲಾಗಿದೆ.
ಭೂ ನ್ಯಾಯ ಮಂಡಳಿಯ ಸಹಾಯಕ ಕಮಿಷನರ್ ರವಿ ಕುಮಾರ್ ಇವರನ್ನು ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳಿಗೆ, ಉಡುಪಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅರುಣಪ್ರಭಾ ಇವರನ್ನು ಉಡುಪಿ ಮತ್ತು ಕಾಪು ತಾಲೂಕುಗಳಿಗೆ, ಉಡುಪಿ ಭೂದಾಖಲೆಗಳ ಇಲಾಖೆಯ ಭೂಮಾಪನ ಮತ್ತು ತಾಂತ್ರಿಕ ಸಹಾಯಕರು (ಪ್ರಭಾರ) ರವೀಂದ್ರ ಇವರನ್ನು ಬ್ರಹ್ಮಾವರ ತಾಲೂಕಿಗೆ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಅಧಿಕಾರಿಗಳಾಗಿ ನೇಮಕಗೊಂಡಿದ್ದಾರೆ.
ಇವರು ತಮಗೆ ಸಂಬಂಧಿಸಿದ ತಾಲೂಕುಗಳ ಕಂಟೈನ್ಮೆಂಟ್ ವಲಯಗಳಲ್ಲಿ ಘಟನಾ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕೋವಿಡ್-19ರ ಪಾಸಿಟಿವ್ ಪ್ರಕರಣಗಳ ಬಗ್ಗೆ ನಿಯಂತ್ರಿತ ಕಂಟೈನ್ಮೆಂಟ್ ವಲಯಗಳ ಅಧಿಸೂಚನೆ ಹೊರಡಿಸುವ ಬಗ್ಗೆ ಸಂಬಂಧಪಟ್ಟ ತಹಶೀಲ್ದಾರರಿಂದ ಅಗತ್ಯ ಮಾಹಿತಿಗಳನ್ನು ಪಡೆದುಕೊಂಡು ನಿಯಂತ್ರಿತ ವಲಯ- ಕಂಟೈನ್ಮೆಂಟ್ ರೆನ್-ಗಳ ಅಧಿಸೂಚನೆ ಹೊರಡಿಸಲು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ.
ನಂತರ ಈ ವಲಯಗಳನ್ನು ಡಿನೋಟಿಫೈ ಮಾಡುವ ಬಗ್ಗೆಯೂ ನಿಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವರು. ನಿಯಂತ್ರಿತ ವಲಯಗಳಿಗೆ ಸಂಬಂಧಿಸಿದ ಇತರ ಎಲ್ಲಾ ಕೆಲಸ ಕಾರ್ಯಗಳನ್ನು ಚಾಚು ತಪ್ಪದೆ ನಿರ್ವಹಿಸಲು ಕುಂದಾಪುರ /ಬೈಂದೂರು ತಾಲೂಕಿನ ಜವಾಬ್ದಾರಿಯನ್ನು ಕುಂದಾಪುರ ಉಪಭಾಗದ ಸಹಾಯಕ ಕಮೀಷನರ್ ಇವರು ನಿರ್ವಹಿಸಬೇಕೆಂದು ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜಿ.ಜಗದೀಶ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.