ಉಡುಪಿ ಜಿಲ್ಲೆಯಲ್ಲಿ ಸರಳವಾಗಿ ನಡೆದ ನಾಗರಪಂಚಮಿ
ಉಡುಪಿ, ಜು.25: ಜಿಲ್ಲಾಡಳಿತದ ಸೂಚನೆ ಹಾಗೂ ಸರಕಾರದ ಮಾರ್ಗಸೂಚಿಗಳ ಅನುಸಾರ ಉಡುಪಿ ಜಿಲ್ಲೆಯಾದ್ಯಂತ ಶನಿವಾರ ನಾಗರ ಪಂಚಮಿ ಆಚರಣೆ ಸರಳವಾಗಿ ನಡೆಯಿತು. ಜಿಲ್ಲೆಯ ವಿವಿಧ ನಾಗಬನಗಳು ಹಾಗೂ ನಾಗನ ಮೂಲಸ್ಥಾನಗಳಲ್ಲಿ ನಾಗನಿಗೆ ತನು ಎರೆಯುವಾಗ ಬೆರಳೆಣಿಕೆಯ ಭಕ್ತರಷ್ಟೇ ಕಾಣಿಸಿಕೊಂಡರು. ಆದರೂ ನಾಗರಪಂಚಮಿ ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ನಡೆಯಿತು.
ಜಿಲ್ಲೆಯ ನಾಲ್ಕು ಪ್ರಮುಖ ಸುಬ್ರಹ್ಮಣ್ಯ ಕ್ಷೇತ್ರಗಳಾದ ಮುಚ್ಲುಕೋಡು, ತಾಂಗೋಡು, ಮಾಂಗೋಡು, ಅರಿತೋಡು ಸುಬ್ರಹ್ಮಣ್ಯ ದೇವಸ್ಥಾನ, ಗುಂಡಿಬೈಲು ಸುಬ್ರಹ್ಮಣ್ಯ ದೇವಸ್ಥಾನ, ಕಿದಿಯೂರು ನಾಗಸನ್ನಿಧಿ, ಬ್ರಹ್ಮಗಿರಿ ಸರ್ಕಲ್ ಬಳಿಯ ನಾಗಸನ್ನಿಧಿ, ಕಿನ್ನಿಮೂಲ್ಕಿಯ ಕನ್ನರ್ಪಾಡಿ ದೇವಸ್ಥಾನದ ಬಳಿಯ ನಾಗಸನ್ನಿಧಿ, ಕರಂಬಳ್ಳಿಯ ವೆಂಕಟರಮಣ ದೇವಸ್ಥಾನ, ಕಡಿಯಾಳಿ ದೇವಸ್ಥಾನ, ವೆಂಕಟರಮಣ ದೇವಸ್ಥಾನ, ಮಠದಬೆಟ್ಟುವಿನ ಸಪರಿವಾರಕ ಶ್ರೀ ನಾಗಬ್ರಹ್ಮಸ್ಥಾನ, ವಾಸುಕಿ ಅನಂತಪದ್ಮನಾಭ ದೇವಸ್ಥಾನ, ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ, ಎಲ್.ವಿ.ಟಿ.ದೇವಸ್ಥಾನದ ಬಳಿ, ಅಂಬಲಪಾಡಿ ಮಹಾಕಾಳಿ ದೇವಸ್ಥಾನದ ಬಳಿ, ಸಗ್ರಿ ವಾಸುಕಿ ದೇವಸ್ಥಾನದ ಬಳಿ, ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ಗುಡಿ, ಪಕ್ಕದ ನಾಗಬನ, ಒಳಕಾಡು ಕಟ್ಟೆ ಆಚಾರ್ಯ ಮಾರ್ಗದ ಬಳಿ ಸಹಿತ ಹಲವಾರು ಕಡೆಗಳಲ್ಲಿ ನಾಗದೇವರಿಗೆ ತನು ಎರೆಯಲಾಯಿತು. ಅದೇ ರೀತಿ ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳಲ್ಲೂ ವಿವಿಧ ದೇವಾಲಯಗಳಲ್ಲೂ ಸರಳವಾಗಿ ನಡೆಯಿತು.
ಶ್ರೀ ಕೃಷ್ಣ ಮಠದಲ್ಲಿ ಸೋದೆ ವಾದಿರಾಜ ಶ್ರೀಪಾದರಿಂದ ಪ್ರತಿಷ್ಠಿತ ಸುಬ್ರಹ್ಮಣ್ಯ ದೇವರ ಗುಡಿಯಲ್ಲಿ ನಾಗರಪಂಚಮಿ ಪ್ರಯುಕ್ತ ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಈಶಪ್ರಿಯತೀರ್ಥ ಶ್ರೀಪಾದರು ನಾಗದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.
ನಾಗಬ್ರಹ್ಮಸ್ಥಾನ, ನಾಗಬನಗಳಲ್ಲಿ ತನು (ಹಾಲು, ಎಳನೀರು, ಜೇನುತುಪ್ಪ) ಎರೆದು ಶ್ರದ್ಧೆಯಿಂದ ನಾಗರಪಂಚಮಿ ಆಚರಿಸಲಾಯಿತು. ಆದರೆ ಪೂಜೆಗಳಿಗೆ ಅವಕಾಶವಿರಲಿಲ್ಲ.
ವಿರಳವಾಗಿದ್ದ ಜನರ ಓಡಾಟ
ಈ ಋತುವಿನ ಮೊದಲ ಹಬ್ಬವಾದ ನಾಗರಪಂಚಮಿ ಇಂದು ನೀರಸವಾಗಿ ನಡೆಯಿತು. ಪ್ರತಿವರ್ಷ ನಾಗರಪಂಚಮಿ ದಿನ ಊರ ತುಂಬೆಲ್ಲಾ ಜನಸಂಚಾರ ಜೋರಾಗಿರುತ್ತಿತ್ತು. ಕರಾವಳಿಯಲ್ಲಿ ನಾಗರಪಂಚಮಿ ಅತಿ ಪ್ರಮುಖ ಹಬ್ಬವಾಗಿದ್ದು, ಜನರು ತಮ್ಮ ಮೂಲಸ್ಥಾನಗಳಿಗೆ ತಪ್ಪದೇ ತೆರಳಿ ತನು ಎರೆಯುವುದು ಇಲ್ಲಿನ ಸಂಪ್ರದಾಯ.
ಹೀಗಾಗಿ ನಾಗರಪಂಚಮಿ ದಿನದಂದು ಎಲ್ಲೆಂದರಲ್ಲಿ ಜನಸಂದಣಿ ಕಂಡು ಬರುತ್ತಿತ್ತು. ನಗರಗಳ ಜನರು ಸಹ ತಮ್ಮ ಹಳ್ಳಿ, ಗ್ರಾಮದಲ್ಲಿರುವ ನಾಗಬನಗಳಿಗೆ ತೆರಳುತಿದ್ದರು. ಇದರಿಂದ ಎಲ್ಲಾ ಬಸ್ಸುಗಳಲ್ಲಿ ಜನರು ಕಿಕ್ಕಿರಿದು ತುಂಬಿರುತ್ತಿದ್ದರು. ಆದರೆ ಕೊರೋನಾದಿಂದಾಗಿ ಈ ಬಾರಿ ಇಂಥ ದೃಶ್ಯ ಕಾಣಲು ಸಿಗಲಿಲ್ಲ. ಜನರು ತೀರಾ ಸರಳವಾಗಿ ನಾಗರಪಂಚಮಿಯನ್ನು ಆಚರಿಸಿದರು.