ಮಂಗಳೂರಿನಲ್ಲಿ ಕಾರ್ಗಿಲ್ ವಿಜಯ ದಿನಾಚರಣೆ
ಮಂಗಳೂರು, ಜು.26: ಪಾಕಿಸ್ತಾನ ಸೇನೆ ಆಕ್ರಮಿಸಿಕೊಂಡಿದ್ದ ಕಾರ್ಗಿಲ್ ನ ಕೆಲವು ಪ್ರದೇಶಗಳನ್ನು 21 ವರ್ಷ(1999ರ ಜುಲೈ 26)ಗಳ ಹಿಂದೆ ಭಾರತೀಯ ಯೋಧರು ಮರಳಿ ಪಡೆದಿದ್ದರು. ಇದರ ಸ್ಮರಣಾರ್ಥ ಪ್ರತೀ ವರ್ಷ ಜು.26ರಂದು 'ಕಾರ್ಗಿಲ್ ವಿಜಯ ದಿನ' ಆಚರಿಸಲಾಗುತ್ತದೆ. ಅದರಂತೆ ರವಿವಾರ ನಗರದ ಕದ್ರಿಯ ಹುತಾತ್ಮರ ಸ್ಮಾರಕದ ಬಳಿ ವಿಜಯ ದಿನವನ್ನು ಆಚರಿಸಲಾಯಿತು.
ದ.ಕ. ಮಾಜಿ ಸೈನಿಕರ ಸಂಘ, ಲಯನ್ಸ ಕ್ಲಬ್ ಮಂಗಳೂರು, ಸೆಂಟರ್ ಫಾರ್ ಇಂಟರಗ್ರೇಟೆಡ್ ಲರ್ನಿಂಗ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ. ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ದೇಶದ ಸೈನಿಕರ ಹೋರಾಟ, ತ್ಯಾಗ ಬಲಿದಾನವನ್ನು ಯುವ ಪೀಳಿಗೆಯು ತಿಳಿದುಕೊಳ್ಳುವ ಅಗತ್ಯವಿದೆ ಎಂದರು.
ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಿಟ್ಟೆಗುತ್ತು ಶರತ್ ಭಂಡಾರಿ, ಲಯನ್ಸ್ ಕ್ಲಬ್ ಅಧ್ಯಕ್ಷ ಕೃಷ್ಣಾನಂದ ಪೈ, ನಂದಗೋಪಾಲ್ ಮತ್ತಿತರರು ಪಾಲ್ಗೊಂಡಿದ್ದರು.
ಕೊರೋನ ಹಿನ್ನಲೆಯಲ್ಲಿ ಸುರಕ್ಷಿತ ಅಂತರ ಕಾಪಾಡುವ ನಿಟ್ಟಿನಲ್ಲಿ ಕೆಲವೇ ಮಂದಿ ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.