ಖ್ಯಾತ ವೈದ್ಯ ಡಾ.ಕೃಷ್ಣ ರಾವ್ ನಿಧನ

ಉಡುಪಿ, ಜು. 26: ಮಣಿಪಾಲ ಕೆಎಂಸಿ ಮತ್ತು ಕಸ್ತೂರ್ಬಾ ಆಸ್ಪತ್ರೆಯ ನಿವೃತ್ತ ಡೀನ್ ಹಾಗೂ ಜನಪ್ರಿಯ ವೈದ್ಯ ಎ. ಕೃಷ್ಣ ರಾವ್ (96) ಜು. 26ರಂದು ಮಣಿಪಾಲ ಸೋನಿಯಾ ಕ್ಲಿನಿಕ್ ಆವರಣದಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪುತ್ರಿಯರಾದ ಸೋನಿಯಾ ಕ್ಲಿನಿಕ್ನ ಡಾ.ಗಿರಿಜಾ, ಡಾ.ಗೌರಿ, ಡಾ.ಶುಭಗೀತಾ ಅವರನ್ನು ಅಗಲಿದ್ದಾರೆ. 1954ರಲ್ಲಿ ಮಣಿಪಾಲದ ನಿರ್ಮಾತೃ ಡಾ.ಟಿಎಂಎ ಪೈಯವರು ದೇಶದ ಮೊದಲ ಖಾಸಗಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಿದ ಸಂದರ್ಭ ಮಣಿಪಾಲಕ್ಕೆ ಬಂದ ಡಾ.ಕೃಷ್ಣ ರಾವ್ ಮತ್ತು ಪತ್ನಿ ಡಾ. ಪದ್ಮಾ ರಾವ್ ಅನಂತರ ಜೀವಿತದ ಕೊನೆಯವರೆಗೂ ಮಣಿಪಾಲದಲ್ಲಿ ನೆಲೆಸಿದ್ದರು.
ಮೂಲತಃ ಆಂಧ್ರಪ್ರದೇಶದವರಾದ ಡಾ.ರಾವ್, ಫಿಸಿಯೋಲಜಿ ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಬೋಧನೆಯನ್ನು ಮಾಡಿ ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿದ್ದರು. ಅವರು ಜ್ಞಾನದೊಂದಿಗೆ ಸರಳತೆ, ವಿನಯಶೀಲತೆ, ಬದ್ಧತೆಯನ್ನು ಹೊಂದಿ ಜನಮನ್ನಣೆ ಪಡೆದಿದ್ದರು.
ಕೆಎಂಸಿಯ ಡೀನ್ ಆಗಿ 22 ವರ್ಷ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ನಿವೃತ್ತಿ ಬಳಿಕವೂ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ರಾವ್ ಅನೇಕ ವೈದ್ಯಕೀಯ ನಿಯತಕಾಲಿಕೆಗಳಲ್ಲಿ ಪ್ರಬಂಧಗಳನ್ನು ಪ್ರಕಟಿಸಿದ್ದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ ಹಿರಿಮೆ ಇವರಿಗೆ ಇದೆ.
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ನ ಅಧ್ಯಕ್ಷರಾಗಿಯೂ ಅವರು ಅನೇಕ ವರ್ಷ ಮಾರ್ಗದರ್ಶನ ಮಾಡಿದ್ದರು.
ಸಾರ್ವಜನಿಕರಿಗೆ ಸೋಮವಾರ ಬೆಳಗ್ಗೆ 8.30ರಿಂದ 9 ಗಂಟೆ ವರೆಗೆ ಮಣಿಪಾಲದ ಸೋನಿಯಾ ಕ್ಲಿನಿಕ್ನಲ್ಲಿ ಅಂತಿಮ ನಮನ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ.







