ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಸರಕಾರ ವಿಫಲ: ಐವನ್ ಡಿಸೋಜ ಆರೋಪ
ಮಂಗಳೂರು, ಜು.27: ರಾಜ್ಯದಲ್ಲಿ ಕೋವಿಡ್ ರೋಗಿಯ ಚಿಕಿತ್ಸೆಗೆ ಸರಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಅಲ್ಲದೆ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಸರಕಾರ ಸಂಪೂರ್ಣ ವಿಲವಾಗಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಕೋವಿಡ್ ಸಹಾಯವಾಣಿ ಸಮಿತಿಯ ಅಧ್ಯಕ್ಷ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್, ಬೆಡ್, ಐಸಿಯುಗಳ ಕೊರತೆಯಿದೆ. ಸರಿಯಾದ ಚಿಕಿತ್ಸೆ ಸಿಗದೆ ಪ್ರತಿನಿತ್ಯ ಜನರು ಸಾಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳ ಬಿಲ್ಲ್ ನೋಡಿದರೆ ಹೃದಯಾಘಾತದಿಂದ ಸಾಯುವಂತಿದೆ. ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ದಿನಕ್ಕೆ ಸೆಮಿ ಪ್ರೈವೈಟ್ ವಾರ್ಡ್ಗೆ 35ರಿಂದ 50ಸಾವಿರ, ಖಾಸಗಿ ವಾರ್ಡ್ಗೆ 50ರಿಂದ 65 ಸಾವಿರ, ಡಿಲಕ್ಸ್ ವಾರ್ಡ್ಗೆ 60ರಿಂದ 75 ಸಾವಿರ ರೂ. ಬಿಲ್ ಮಾಡಲಾಗುತ್ತಿದೆ. ಇದು ರಾಜ್ಯ ಆರೋಗ್ಯ ಸಚಿವರಿಗೆ ಕಾಣುವುದಿಲ್ಲವೇ? ಹೀಗಾದಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳು ಕೋವಿಡ್ ಚಿಕಿತ್ಸೆಗೆ ಬೆಡ್ಡ್ ಮೀಸಲಿಡಲು ಸಾಧ್ಯವೇ? ಒಟ್ಟಿನಲ್ಲಿ ರಾಜ್ಯ ಸರಕಾರ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.
ದ.ಕ. ಜಿಲ್ಲೆಯಲ್ಲಿ ವೆಂಟಿಲೇಟರ್ ಕೊರತೆ ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ತಕ್ಷಣ ಜಿಲ್ಲಾಡಳಿತ ಹೆಚ್ಚಿನ ವೆಂಟಿಲೇಟರ್ಗೆ ವ್ಯವಸ್ಥೆ ಮಾಡಬೇಕಾಗಿದೆ. ಜಿಲ್ಲೆಗೆ ಕನಿಷ್ಠ 50 ಆ್ಯಂಬುಲೆನ್ಸ್ ಅವಶ್ಯಕತೆಯಿದ್ದು, ಮಂಗಳೂರಿಗೆ 10 ಆ್ಯಂಬುಲೆನ್ಸ್ ತುರ್ತು ಸೇವೆಗೆ ಬೇಕಾಗಿದೆ. ಕೋವಿಡ್ ಸಾವಿನ ಬಗ್ಗೆ ಜಿಲ್ಲಾಮಟ್ಟದ ತಜ್ಞರ ಸಮಿತಿ ವರದಿ ತಯಾರಿಸುತ್ತಿದ್ದು, ಅದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಕೋವಿಡ್ ವ್ಯಕ್ತಿ ಮೃತಪಟ್ಟಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು, ಮುಂಜಾಗ್ರತೆ ವಹಿಸಿ ಮೃತದೇಹವನ್ನು ನೋಡಬಹುದೆಂದು ಕೇಂದ್ರದ ಗೈಡ್ಲೈನ್ಸ್ನಲ್ಲಿರುವಾಗ ಜಿಲ್ಲಾಡಳಿತ ಯಾಕೆ ಹಿಂದೇಟು ಹಾಕುತ್ತಿದೆ ಎಂದು ಪ್ರಶ್ನಿಸಿದ ಐವನ್, ಮೃತವ್ಯಕ್ತಿಯ ಸಂಬಂಧಿಕರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ರ ನಿರ್ದೇಶನದಂತೆ 50 ಮಂದಿ ಸದಸ್ಯರನ್ನು ಒಳಗೊಂಡ ಸಹಾಯವಾಣಿ ತೆರೆಯಲಾಗಿದೆ. ಈ ಸಮಿತಿ ಕೋವಿಡ್ ವಿಚಾರದಲ್ಲಿ ತುರ್ತು ಸ್ಪಂದನೆ ನೀಡಲಿದೆ. ಎಐಸಿಸಿ ಸದಸ್ಯೆ ಕವಿತಾ ಸನಿಲ್ ಕಚೇರಿಯಲ್ಲಿದ್ದುಕೊಂಡು ನಿರ್ವಹಣೆ ಮಾಡಿದರೆ ಕೋವಿಡ್ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದಂತೆ ಪ್ರವೀಣ್ಚಂದ್ರ ಆಳ್ವ ನೇತೃತ್ವದ ತಂಡ ಮೇಲ್ವಿಚಾರಣೆ ನಡೆಸಲಿದೆ. ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮತ್ತು ಶಾಸಕ ಯು.ಟಿ. ಖಾದರ್ ಸಹಾಯವಾಣಿ ಕಾರ್ಯಾಚರಣೆಗೆ ವಾಹನ ಒದಗಿಸಿದ್ದಾರೆ. ಸಹಾಯವಾಣಿಯಲ್ಲಿ ಸಾರ್ವಜನಿಕರಿಗೆ ಜಾಗೃತಿ ನೀಡುವುದರ ಜತೆಗೆ ಕೋವಿಡ್ಗೆ ಸಂಬಂಧಿಸಿ ಸರಕಾರದ ಸೌಲಭ್ಯ ಜನರಿಗೆ ಮುಟ್ಟುವ ಕೆಲಸ ಮಾಡಲಿದೆ. ಈ ಸಮಿತಿ ಆಸ್ಪತ್ರೆಗಳ ಜತೆ ನೇರ ಸಂಪರ್ಕವಿರಿಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಹಾಯವಾಣಿ ಸಮಿತಿಯ ಶಶಿಧರ್ ಹೆಗ್ಡೆ, ಕವಿತಾ ಸನಿಲ್, ರಜನೀಶ್, ಪ್ರಕಾಶ್ ಸಾಲ್ಯಾನ್, ಮುಹಮ್ಮದ್ ಕುಂಜತ್ತಬೈಲ್, ಸದಾಶಿವ ಉಳ್ಳಾಲ್, ವಿಶ್ವಾಸ್ದಾಸ್, ಜೆಸಿಂತಾ ಅಲ್ಪ್ರೆಡ್ ಮತ್ತಿತರರು ಉಪಸ್ಥಿತರಿದ್ದರು.