ಅಡ್ಯಾರ್ ಗ್ರಾಪಂ ಸದಸ್ಯನ ಕೊಲೆ ಪ್ರಕರಣ: ನಾಲ್ಕನೇ ಆರೋಪಿ ಸೆರೆ
ಮಂಗಳೂರು, ಜು.27: ಅಡ್ಯಾರ್ ಗ್ರಾಮ ಪಂಚಾಯತ್ ಸದಸ್ಯ ಯಾಕೂಬ್ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕನೇ ಆರೋಪಿಯನ್ನು ಗ್ರಾಮಾಂತರ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಮಾರಿಪಳ್ಳ ಮಿತ್ತಬೆಟ್ಟು ನಿವಾಸಿ ಉಮರ್ ಫಾರೂಕ್ (35) ಬಂಧಿತ ಆರೋಪಿ. ಇದೇ ಪ್ರಕರಣದಲ್ಲಿ ಮುಹಮ್ಮದ್ ಶಾಕಿರ್, ಹನೀಫ್, ಅಹ್ಮದ್ ಶಾಕೀರ್ ಎಂಬವರನ್ನು ಜು.14ರಂದು ಬಂಧಿಸಲಾಗಿತ್ತು.
ಘಟನೆ ವಿವರ: ಯಾಕೂಬ್ ಮತ್ತು ಶಾಕೀರ್ಗೆ ವೈಯಕ್ತಿಕವಾಗಿ ಮನಸ್ತಾಪವಿತ್ತು ಎನ್ನಲಾಗಿತ್ತು. ಇದೇ ವಿಚಾರದಲ್ಲಿ ಜು.10ರಂದು ಸಂಜೆ ಅಡ್ಯಾರ್ಪದವು ಎಂಬಲ್ಲಿ ವಾಗ್ವಾದ ನಡೆದಿತ್ತು. ಈ ವೇಳೆ ಕೋಪಗೊಂಡ ಶಾಕೀರ್ ಮತ್ತು ತಂಡ ಯಾಕೂಬ್ಗೆ ಏಕಾಏಕಿ ಹಲ್ಲೆ ನಡೆಸಿತ್ತು ಎಂದು ಆರೋಪಿಸಲಾಗಿತ್ತು. ಆಗ ಯಾಕೂಬ್ ಕುಸಿದು ಬಿದ್ದಿದ್ದು, ತಂಡ ಅಲ್ಲಿಂದ ಪರಾರಿಯಾಗಿತ್ತು. ಕೂಡಲೇ ಸ್ಥಳೀಯರು ಯಾಕೂಬ್ರನ್ನು ನಗರದ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಫಾರೂಕ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.