ಕಾರ್ನಾಡು: ನಿಲ್ಲಿಸಿದ್ದ ಲಾರಿಗೆ ರಿಕ್ಷಾ ಢಿಕ್ಕಿ; ಚಾಲಕ ಗಂಭೀರ

ಮುಲ್ಕಿ, ಜು.27: ನಿಲ್ಲಿಸಿದ್ದ ಲಾರಿಗೆ ಆಟೊ ರಿಕ್ಷಾವೊಂದು ಢಿಕ್ಕಿ ಹೊಡೆದ ಪರಿಣಾಮ ಚಾಲಕ ಗಂಭೀರ ಗಾಯಗೊಂಡ ಘಟನೆ ಇಲ್ಲಿಗೆ ಸಮೀಪದ ಕಾರ್ನಾಡು ಧರ್ಮಸ್ಥಾನ ಬಳಿ ಸೋಮವಾರ ರಾತ್ರಿ ನಡೆದಿದೆ.
ಶಿಮಂತೂರು ನಿವಾಸಿ ಕಿರಣ್(35) ಗಾಯಗೊಂಡ ರಿಕ್ಷಾ ಚಾಲಕ. ಇವರು ಕಾರ್ನಾಡುನಿಂದ ಹೆದ್ದಾರಿ ಕಡೆ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಹೋಗುತ್ತಿದ್ದ ವೇಳೆ ಧರ್ಮಸ್ಥಾನ ಮರದ ಮಿಲ್ ಬಳಿ ಏರುರಸ್ತೆಯಲ್ಲಿ ಕತ್ತಲೆಯಲ್ಲಿ ನಿಲ್ಲಿಸಿದ್ದ ಲಾರಿಯನ್ನು ಗಮನಿಸಿದೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಕಿರಣ್ರನ್ನು ಕೆ.ಎಸ್.ರಾವ್ ನಗರದ ನಿವಾಸಿಗಳಾದ ಇಲ್ಯಾಸ್ ಮತ್ತು ಫಾರೂಕ್ ಸಹೋದರರು ತಕ್ಷಣ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ.
ಲಾರಿ ಚಾಲಕ ಕಿನ್ನಿಗೋಳಿಯಲ್ಲಿ ಸಿಮೆಂಟ್ ಲೋಡ್ ಇಳಿಸಿ ವಾಪಸ್ ಮಂಗಳೂರಿಗೆ ತೆರಳುತ್ತಿರುವ ವೇಳೆಯಲ್ಲಿ ಕಾರ್ನಾಡು ಧರ್ಮಸ್ಥಾನದ ಬಳಿಯಲ್ಲಿ ಲಾರಿ ಕೆಟ್ಟು ಹೋದ ಕಾರಣ ಚಾಲಕ ನಿಲ್ಲಿಸಿದ್ದ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಚಾಲಕನ್ನು ಆಸ್ಪತ್ರೆಗೆ ಸೇರಿಸಿದ ಯುವಕರ ಮಾನವೀಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.








