‘ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್’ಗೆ ಜು.29ರಂದು ಸಿಎಂ ಯಡಿಯೂರಪ್ಪ ಶಿಲಾನ್ಯಾಸ
ಬಿಟಿ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು: ಡಿಸಿಎಂ ಡಾ.ಅಶ್ವತ್ಥ ನಾರಾಯಣ
![‘ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್’ಗೆ ಜು.29ರಂದು ಸಿಎಂ ಯಡಿಯೂರಪ್ಪ ಶಿಲಾನ್ಯಾಸ ‘ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್’ಗೆ ಜು.29ರಂದು ಸಿಎಂ ಯಡಿಯೂರಪ್ಪ ಶಿಲಾನ್ಯಾಸ](https://www.varthabharati.in/sites/default/files/images/articles/2020/07/28/252862-1595939127.jpg)
ಬೆಂಗಳೂರು, ಜು. 28: ಎರಡು ದಶಕಗಳ ಕನಸಾಗಿದ್ದ, ರಾಜ್ಯ ಬಯೋ ಟೆಕ್ನಾಲಜಿ(ಬಿಟಿ) ಕ್ಷೇತ್ರಕ್ಕೆ ನಿರ್ಣಾಯಕ ಕೊಡುಗೆ ನೀಡಬಲ್ಲ `ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್'ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ (ಜು.29) ಅಡಿಗಲ್ಲು ಹಾಕಲಿದ್ದಾರೆ ಎಂದು ಐಟಿ-ಬಿಟಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಆನ್ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 5 ಸಾವಿರ ಕೋಟಿ ರೂ.ಹೂಡಿಕೆಯಲ್ಲಿ ತಲೆ ಎತ್ತಲಿರುವ ಈ ಲೈಫ್ ಸೈನ್ಸೆಸ್ ಪಾರ್ಕಿನಿಂದ ದೇಶದ ಬಿಟಿ ರಾಜಧಾನಿ ಎಂದು ಈಗಾಗಲೇ ಹೆಗ್ಗಳಿಕೆ ಪಡೆದಿರುವ ಬೆಂಗಳೂರು ನಗರದ ಪ್ರಾಮುಖ್ಯತೆ ಮತ್ತಷ್ಟು ಹೆಚ್ಚಾಗಲಿದೆ. ದೇಶದಲ್ಲಿ ಹಾಗೂ ಜಾಗತಿಕವಾಗಿಯೂ ಬಯೋ ಟೆಕ್ನಾಲಜಿ ಕ್ಷೇತ್ರ ಮತ್ತಷ್ಟು ನಿರ್ಣಾಯಕವಾಗಲಿದೆ ಎಂದರು.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ಥಾಪನೆಯಾಗುತ್ತಿರುವ ಈ ಯೋಜನೆಗೆ ಬುಧವಾರ ಬೆಳಗ್ಗೆ 9.30ಕ್ಕೆ ಶಿಲಾನ್ಯಾಸ ನಡೆಯಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರ ಜತೆಗೆ ಬಯೋಕಾನ್ ಕಂಪನಿಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಸರಕಾರದ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ ಎಂದು ಡಾ.ಅಶ್ವತ್ಥ ನಾರಾಯಣ ಮಾಹಿತಿ ನೀಡಿದರು.
ವಿಷನ್ ಗ್ರೂಪ್ ನೀಡಿದ್ದ ಸಲಹೆ: ಕಿರಣ್ ಮಜುಂದಾರ್ ಶಾ ಅವರ ನೇತೃತ್ವದಲ್ಲಿ 2000 ಸಾಲಿನಲ್ಲಿಯೇ ಕರ್ನಾಟಕದಲ್ಲಿ ಬಯೋಟೆಕ್ನಾಲಜಿಯ ವಿಷನ್ ಗ್ರೂಪ್ ರಚಿಸಲಾಯಿತು. ಕೈಗಾರಿಕೆ ಮತ್ತು ಸರಕಾರದ ನಡುವಿನ ಅಂತರವನ್ನು ಕಡಿಮೆ ಮಾಡಲು ಮತ್ತು ರಾಜ್ಯದ ಜೈವಿಕ ತಂತ್ರಜ್ಞಾನ ಪರಿಸರ ವ್ಯವಸ್ಥೆಯ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸಲು ಮುಂದಿನ ಮಾರ್ಗವನ್ನು ಜಂಟಿಯಾಗಿ ಸಾಧಿಸಲು `ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್' ಸ್ಥಾಪಿಸಲು ಸಲಹೆ ನೀಡಲಾಗಿತ್ತು. ಅದರಂತೆ ಪ್ರತಿಷ್ಟಿತ ಈ ಯೋಜನೆಗೆ ಅಡಿಗಲ್ಲು ಹಾಕಲಾಗುತ್ತಿದೆ ಎಂದು ತಿಳಿಸಿದರು.
ಪ್ರಸಕ್ತ ದಿನಗಳಲ್ಲಿ ಜೈವಿಕ ತಂತ್ರಜ್ಞಾನವು ಬಹಳ ವೇಗವಾಗಿ ಬೆಳೆಯುತ್ತಿದೆಯಲ್ಲದೆ, ಮಾನವ ಸಮಾಜಕ್ಕೆ ಅನಿವಾರ್ಯವಾಗಿದೆ. ಆರೋಗ್ಯ, ಕೃಷಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಇದು ನಿರ್ಣಾಯಕ ಪಾತ್ರ ವಹಿಸುತ್ತಿದೆ. ಅದರಲ್ಲೂ ಕೋವಿಡ್-19 ನಂತರದ ಕಾಲದಲ್ಲಿ ಹಾಗೂ ಭವಿಷ್ಯದಲ್ಲಿ ಇಂತಹ ಮಾರಣಾಂತಕ ವೈರಸ್ಗಳ ಸವಾಲು ಎದುರಾದರೆ ಜೈವಿಕ ತಂತ್ರಜ್ಞಾನದಿಂದಲೇ ಅದೆಲ್ಲವನ್ನೂ ಹಿಮ್ಮೆಟ್ಟಿಸಲು ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ನಮ್ಮ ಬೆಂಗಳೂರು ಮುಂದಿನ ಸವಾಲುಗಳಿಗೆ ಸಜ್ಜಾಗುತ್ತಿದೆ ಮಾತ್ರವಲ್ಲದೆ, ಈಗ ಅಸ್ತಿತ್ವಕ್ಕೆ ಬರುತ್ತಿರುವ ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಹೇಳಿದರು.
ಬೆಂಗಳೂರೇ ಲೀಡರ್: ಈಗಾಗಾಲೇ ಬೆಂಗಳೂರಿನಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಸಂಶೋಧನೆಗಳು ನಡೆಯುತ್ತಿವೆ. ಆ ರೀತಿಯ ದೊಡ್ಡ ಬೇಸ್ ನಮ್ಮಲ್ಲಿ ಸೃಷ್ಟಿ ಆಗಿದೆ. ಅದನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಿದೆ. ಸದ್ಯಕ್ಕೆ ನಮ್ಮ ರಾಜ್ಯವು ಬಿಟಿ ವಲಯದಲ್ಲಿ ಏಷ್ಯಾ ಖಂಡದಲ್ಲಿ ಶೇ.9ರಷ್ಟು ಹಾಗೂ ನಮ್ಮ ದೇಶದಲ್ಲೇ ಶೇ.35ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.
ಜತೆಗೆ, ನಮ್ಮಲ್ಲಿ 380 ಜೈವಿಕ ತಂತ್ರಜ್ಞಾನ ಕಂಪೆನಿಗಳು ಹಾಗೂ 200ಕ್ಕೂ ಹೆಚ್ಚು `ಸ್ಟಾರ್ಟಪ್'ಗಳು ಇವೆ. ಈ 30 ಸರಕಾರಿ ಸಂಸ್ಥೆಗಳು ಇದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ. ಇವೆಲ್ಲ ಸಂಸ್ಥೆಗಳು ಅತ್ಯಂತ ಪ್ರತಿಷ್ಠಿತ ಹಾಗೂ ಜಾಗತಿಕ ಮಟ್ಟದ ಖ್ಯಾತಿ ಹೊಂದಿರುವಂತವುಗಳಾಗಿವೆ. ಇವುಗಳ ಜೊತೆಗೆ ಲೈಫ್ ಸೈನ್ಸೆಸ್ ಪಾರ್ಕ್ ಸೇರುತ್ತಿರುವುದು ಈ ಕ್ಷೇತ್ರಕ್ಕೆ ದೊಡ್ಡ ಬಲ ಬಂದಂತೆ ಆಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ದೇಶದ ಒಟ್ಟಾರೆ ಶೇ.60ರಷ್ಟು ಬಯೋ ಫಾರ್ಮ್ ಉತ್ಪನ್ನಗಳು ನಮ್ಮ ರಾಜ್ಯದಲ್ಲಿಯೇ ಆಗುತ್ತಿವೆ. ದೇಶದ ಒಟ್ಟು ಬಯೋ ಉತ್ಪನ್ನಗಳ ರಫ್ತು ವಹಿವಾಟಿನಲ್ಲಿ ಮೂರನೇ ಒಂದು ಭಾಗದಷ್ಟು ಕರ್ನಾಟಕದಿಂದಲೇ ಆಗುತ್ತಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದ ಭಾರತದ ಒಟ್ಟಾರೆ ಮಾನವ ಸಂಪನ್ಮೂಲದಲ್ಲಿ ಶೇ.54ರಷ್ಟು ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದೆ. ಹೊಸ ಅಂಕಿ ಅಂಶಗಳ ಪ್ರಕಾರ ಶೇ.18ರಷ್ಟು `ಸ್ಟಾರ್ಟಪ್'ಗಳು ನಮ್ಮ ರಾಜ್ಯದಲ್ಲಿಯೇ ಇವೆ. ವಾರ್ಷಿಕ ಶೇ.30ರಷ್ಟು ಪ್ರಗತಿ ದಾಖಲಿಸುತ್ತಿವೆ. ಒಂದು ವರ್ಷಕ್ಕೆ 7,500ಕ್ಕೂ ಹೆಚ್ಚು ಬಿಟಿ ಪದವೀಧರರು ಕಾಲೇಜುಗಳಿಂದ ಹೊರಬರುತ್ತಿದ್ದಾರೆಂದು ಅವರು ಮಾಹಿತಿ ನೀಡಿದರು.
ಏನಿದು ಪಾರ್ಕ್: ಬಿಟಿಯ ವಿಷನ್ ಗ್ರೂಪಿನ ಶಿಫಾರಸ್ಸಿನ ಮೇರೆಗೆ, ಬಯೋಹೆಲಿಕ್ಸ್ ಪಾರ್ಕ್ ಅನ್ನು ಈ ಕೆಳಗಿನ ಅಂಶಗಳೊಂದಿಗೆ ರೂಪಿಸಲಾಗಿದೆ. ಒಟ್ಟು 86 ಎಕರೆ ಜಾಗದಲ್ಲಿ ಸಾಂಸ್ಥಿಕ ಪ್ರದೇಶಕ್ಕಾಗಿ 20 ಎಕರೆ, ಸಂಶೋಧನೆ ಉದ್ದೇಶಕ್ಕೆ 10 ಎಕರೆ ಹಾಗೂ `ಕೈಗಾರಿಕಾ ಕ್ಲಸ್ಟರ್'ಗಳ ಅಭಿವೃದ್ಧಿಗೆ 52.27 ಎಕರೆಯನ್ನು ಮೀಸಲು ಇಡಲಾಗಿದೆ. ಬಯೋ ಟೆಕ್ನಾಲಜಿ ಕ್ಷೇತ್ರದ ದೊಡ್ಡ ಹಬ್ ಆಗಿ `ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್' ಹೊರಹೊಮ್ಮಲಿದೆ.
64 ವರ್ಷಗಳ ಲೀಸ್ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ. ಈ ನಿಗದಿತ ಪಾರ್ಕ್ನಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 50 ಸಾವಿರ ಮಂದಿಗೆ ಉದ್ಯೋಗ ಲಭ್ಯವಾಗಲಿದೆ. ಜಾಗತಿಕ ಗುಣಮಟ್ಟದ ಪ್ರಯೋಗಾಲಯಗಳು ಇಲ್ಲಿ ನಡೆಯಲಿವೆ. ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಈ ಯೋಜನೆ ಬರುತ್ತಿದ್ದು, ಇದನ್ನು ಮಾದರಿ ಟೌನ್ಶಿಪ್ ಆಗಿ ಅಭಿವೃದ್ಧಿ ಮಾಡಲಾಗುತ್ತದೆ. ಈಗಾಗಲೇ ಐಟಿ ಕ್ಯಾಪಿಟಲ್ ಆಗಿ ಹೆಸರಾಗಿರುವ ಬೆಂಗಳೂರು ಮುಂದಿನ ದಿನಗಳಲ್ಲಿ ಬಿಟಿ ಕ್ಯಾಪಿಟಲ್ ಆಗಿಯೂ ಹೊರಹೊಮ್ಮಲಿದೆ. ಅದಕ್ಕೆ ಈ ಪಾರ್ಕ್ ಗಣನೀಯ ಕಾಣಿಕೆ ನೀಡಲಿದೆ. ಇದು ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ತಲೆ ಎತ್ತಲಿದೆ.
9ರಿಂದ 10 ದಶಲಕ್ಷ ಚ.ಅಡಿಯಷ್ಟು ವಿಶಾಲ ಜಾಗದಲ್ಲಿ ನಿರ್ಮಾಣವಾಗಲಿರುವ ಈ ಪಾರ್ಕ್ ನಲ್ಲಿ 160ಕ್ಕೂ ಹೆಚ್ಚು ಕಂಪನಿಗಳು ಬರಲಿವೆ. 100ಕ್ಕೂ ಹೆಚ್ಚು ಸ್ಟಾರ್ಟ್ಪ್ಗಳು ಕಾರ್ಯನಿರ್ವಹಿಸಲಿವೆ. 86 ಸಾವಿರದಿಂದ 1ಲಕ್ಷದಷ್ಟು ಉದ್ಯೋಗಿಗಳು ಕೆಲಸ ಮಾಡಲಿದ್ದಾರೆ. 5 ಸಾವಿರ ಕೋಟಿ ರೂ.ಬಂಡವಾಳ ಹೂಡಿಕೆಯಾಗಲಿದೆ. ಮೊದಲ ಹಂತದಲ್ಲಿಯೇ 2 ಘಟಕಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಬಯೋ ಹೆಲಿಕ್ಸ್ ಪಾರ್ಕ್ನಲ್ಲಿ ಸಾಂಸ್ಥಿಕ ಮತ್ತು ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ರಾಜ್ಯ ಸರಕಾರ 150 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ.
ಕಿರಣ್ ಮಜುಂದಾರ್ ಷಾ ಸಂತಸ: ಸುದ್ಧಿಗೋಷ್ಟಿಯಲ್ಲಿ ಹಾಜರಿದ್ದ ಬಯೋಕಾನ್ ಕಂಪೆನಿ ಅಧ್ಯಕ್ಷೆ ಹಾಗೂ ಬಿಟಿ ವಿಷನ್ ಗ್ರೂಪ್ ಮುಖ್ಯಸ್ಥರಾಗಿದ್ದ ಕಿರಣ್ ಮಜುಂದಾರ್ ಷಾ, ಕೊನೆಗೂ ಈ ಯೋಜನೆ ಸಾಕಾರ ಆಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಈ ಯೋಜನೆ ಬಹಳ ಹಿಂದೆಯೇ ಬರಬೇಕಿತ್ತು. ಈಗಲಾದರೂ ಬರುತ್ತಿದೆ ಎಂಬುದಕ್ಕೆ ನನಗೆ ತುಂಬಾ ಆನಂದವಾಗಿದೆ.
ಆದಷ್ಟು ಬೇಗ ಈ ಪಾರ್ಕ್ ಕಾರ್ಯಾರಂಭ ಶುರು ಮಾಡಲಿ ಎಂದು ಅವರು ಹಾರೈಸಿದರಲ್ಲದೆ, ಬೆಂಗಳೂರು ಸೈನ್ಸೆಸ್ ಪಾರ್ಕ್ ಅತ್ಯುತ್ತಮ ಯೋಜನೆಯಾಗಿದೆ. ಇದು ಬಂದ ನಂತರ ನಮ್ಮ ರಾಜ್ಯದ ಬಿಟಿ ಕ್ಷೇತ್ರದ ಶಕ್ತಿ ದುಪ್ಪಟ್ಟಾಗಲಿದೆ ಎಂದರು.
ಬೆಂಗಳೂರು ಸೈನ್ಸೆಸ್ ಪಾರ್ಕ್ ಸಿಇಒ ಚಿರಾಗ್ ಪುರುಷೋತ್ತಮ್, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಮಣ ರೆಡ್ಡಿ ಹಾಜರಿದ್ದರು.