ಉಡುಪಿಯಲ್ಲಿ 25ಕೋ.ರೂ. ವೆಚ್ಚದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಆಗ್ರಹಿಸಿ ಮನವಿ

ಉಡುಪಿ, ಜು.28: ಜಿಲ್ಲಾ ಕೇಂದ್ರ ಸ್ಥಾನವಾದ ಉಡುಪಿಯ ಆದಿಉಡುಪಿಯಲ್ಲಿ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನವನ್ನು ನಿರ್ಮಿಸುವಂತೆ ಆಗ್ರಹಿಸಿ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ನಿಯೋಗ ಜು.27ರಂದು ಉಡುಪಿ ಶಾಸಕ ರಘುಪತಿ ಭಟ್ ಅವರಿಗೆ ಮನವಿ ಸಲ್ಲಿಸಿತು.
ಈಗ ಆದಿಉಡುಪಿಯಲ್ಲಿರುವ ಭವನವು ಕೇವಲ 65ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದರಲ್ಲಿ ಕೇವಲ 250 ಮಂದಿಯ ಆಸನ ವ್ಯವಸ್ಥೆ ಮಾತ್ರ ಇದೆ. ಹಾಗಾಗಿ ಈಗಿರುವ ಭವನವನ್ನು ತಾಲೂಕು ಅಂಬೇಡ್ಕರ್ ಭವನವನ್ನಾಗಿ ಪರಿವರ್ತಿಸಿ, ಅಲ್ಲೇ ಸಮೀಪ ಇರುವ ಸುಮಾರು ಅರ್ಧ ಎಕರೆ ನಿವೇಶನ ದಲ್ಲಿ ಜಿಲ್ಲೆಯ ಸಮಸ್ತ ಪರಿಶಿಷ್ಠ ಜಾತಿ/ಪಂಗಡದದವರಿಗೆ ಉಪಯೋಗವಾಗುವಂತೆ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಭವನವನ್ನು ನಿರ್ಮಿಸಬೇಕೆಂದು ಮನವಿ ಆಗ್ರಹಿಸಲಾಗಿದೆ.
ನಿಯೋಗದಲ್ಲಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್, ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಮುಖಂಡರಾದ ಪರಮೇಶ್ವರ್ ಉಪ್ಪೂರು, ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು, ಶ್ಯಾಮಸುಂದರ್ ತೆಕ್ಕಟ್ಟೆ, ರಾಜೇಂದ್ರನಾಥ್ ಬೆಳ್ಳೆ, ಶ್ರೀಧರ್ ಕುಂಜಿಬೆಟ್ಟು, ಶಿವಾನಂದ ಮೂಡು ಬೆಟ್ಟು ಉಪಸ್ಥಿತರಿದ್ದರು.





