ಟಿಪ್ಪು ಪಠ್ಯ ಕೈಬಿಡುವ ನಿರ್ಧಾರ ಸರಿಯಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

ಬೆಂಗಳೂರು, ಜು. 28: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲಾ ಮಕ್ಕಳ ಪಠ್ಯದ ಹೊರೆ ಕಡಿಮೆ ಮಾಡಬೇಕೆಂಬ ಸರಕಾರದ ನಿರ್ಧಾರ ಸ್ವಾಗತ. ಆದರೆ, ಇದನ್ನೇ ಅವಕಾಶವನ್ನಾಗಿ ಬಳಸಿಕೊಂಡು ಶಾಲಾ ಮಕ್ಕಳ ಪಠ್ಯದಿಂದ ಸ್ವಾತಂತ್ರ್ಯ ಹೋರಾಟಗಾರ, ಅಪ್ರತಿಮ ದೇಶಭಕ್ತ ಟಿಪ್ಪು ಸುಲ್ತಾನ್ ಪಠ್ಯ ಕೈಬಿಡಲು ಮುಂದಾಗಿರುವುದು ಸರಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆಕ್ಷೇಪಿಸಿದ್ದಾರೆ.
ಕೋವಿಡ್ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ಟಿಪ್ಪು ಪಠ್ಯ ಕೈಬಿಡುವ ಮೂಲಕ ಕೇಸರಿಕರಣ ಮತ್ತು ಕೋಮುವಾದದ ನಿರ್ಧಾರಗಳನ್ನು ಕೈಗೊಳ್ಳುವ ಬದಲು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವತ್ತ ಗಮಹರಿಸುವುದು ಸೂಕ್ತ. ಟಿಪ್ಪು ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಅವರು ಈ ದೇಶದ ಇತಿಹಾಸ ಭಾಗವಾಗಿದ್ದಾರೆ.
ಟಿಪ್ಪು ಅವರ ಹೆಸರಿಲ್ಲದೆ ದೇಶದ ಚರಿತ್ರೆ ಅಪೂರ್ಣವಾಗುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಅಪಾರ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ವಿಧಾನ ಮಂಡಲ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡುವ ವೇಳೆ ಈ ಬಗ್ಗೆ ಉಲ್ಲೇಖಿಸಿದ್ದಾರೆ. ಟಿಪ್ಪು ಅವರನ್ನು ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ವಿರೋಧಿಸುತ್ತಿದ್ದಾರೆ. ಸರಕಾರ ತನ್ನ ರಾಜಕೀಯ ಉದ್ದೇಶಕ್ಕಾಗಿ ಇತಿಹಾಸ ತಿರುಚಲು ಮುಂದಾಗಿರುವುದು ಖಂಡನೀಯ. ಕೂಡಲೇ ಸರಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು. ಟಿಪ್ಪು ಪಠ್ಯವನ್ನು ಮುಂದುವರಿಸಬೇಕು ಎಂದು ಸಲೀಂ ಅಹ್ಮದ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.







