ಉಡುಪಿ ಜಿಲ್ಲೆಯಲ್ಲಿ ಮನೆ ಮನೆ ಕಸ ಸಂಗ್ರಹ ನಿರಂತರ: ಪ್ರೀತಿ ಗೆಹ್ಲೋಟ್
ಪಡುಬಿದ್ರಿ: ಜಿಲ್ಲೆಯ ಎಸ್ಎಲ್ಆರ್ಎಮ್ ಘಟಕಗಳಲ್ಲಿ ಮನೆ ಮನೆ ಕಸ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ನಿರಂತರವಾಗಿ ನಡೆಯಲಿದೆ ಎಂದು ಉಡುಪಿ ಜಿಪಂ ಮುಖ್ಯ ಕಾರ್ಯಕನಿರ್ವಹಣಾಕಾರಿ ಪ್ರೀತಿ ಗೆಹ್ಲೋಟ್ ಹೇಳಿದರು.
ಬುಧವಾರ ಹೆಜಮಾಡಿಯ ಅಮವಾಸ್ಯೆಕರಿಯ ಬಳಿ ಸ್ವಚ್ಛತಾ ಶ್ರಮದಾನ- ಬೀಚ್ ಕ್ಲೀನಿಂಗ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ, ಎಸ್ಎಲ್ಆರ್ಎಮ್ ಘಟಕವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಮೀಣ ಸ್ವಚ್ಛತೆ ಪ್ರತಿಯೋರ್ವ ನಾಗರಿಕನೂ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಮಾತನಾಡಿ, ಹೆಜಮಾಡಿ ಬಂದರು ಯೋಜನೆ ಶೀಘ್ರ ಅನುಷ್ಠಾನಗೊಳ್ಳಲಿದ್ದು, ಹೆಜಮಾಡಿಯು ಕಾಪು ಕ್ಷೇತ್ರದ ಅತ್ಯಂತ ಶ್ರೀಮಂತ ಗ್ರಾಮವಾಗಿ ಮೂಡಿಬರಲಿದೆ. ಜತೆಗೆ ಹೆಜಮಾಡಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ರೂ.20 ಲಕ್ಷ ಮೀಸಲಿರಿಸಲಾಗಿದೆ ಎಂದರು.
ಉಡುಪಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ತಾಲ್ಲೂಕು ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷೆ ನೀತಾ ಗುರುರಾಜ್, ಹೆಜಮಾಡಿ ಪಂಚಾಯಿತಿ ಆಡಳಿತಾಕಾರಿ ವೀಣಾ ವಿವೇಕಾನಂದ್, ನಿಕಟಪೂರ್ವಾಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಕರಾವಳಿ ಯುವಕ ವೃಂದದ ಉಪಾಧ್ಯಕ್ಷ ದಿವಾಕರ ಹೆಜ್ಮಾಡಿ, ಯುವತಿ ವೃಂದದ ಅಧಸ್ಯಕ್ಷೆ ಪವಿತ್ರಾ ಗಿರೀಶ್ ಮುಖ್ಯ ಅತಿಥಿಗಳಾಗಿದ್ದರು.
ಹೆಜಮಾಡಿ ಗ್ರಾಪಂ ಪಿಡಿಒ ಮಮತಾ ಶೆಟ್ಟಿ ಸ್ವಾಗತಿಸಿದರು. ಕರಾವಳಿ ಯುವಕ ವೃಂದದ ಜಿತೇಂದ್ರ ವಿ.ರಾವ್ ಮತ್ತು ಶ್ರೇಯಸ್ ಎಸ್.ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ವಂದಿಸಿದರು.
ಉಡುಪಿ ಜಿಲ್ಲಾ ಪಂಚಾಯಿತಿ, ಕಾಪು ತಾಲ್ಲೂಕು ಪಂಚಾಯಿತಿ, ಹೆಜಮಾಡಿ ಗ್ರಾಮ ಪಂಚಾಯಿತಿ, ಸ್ತ್ರೀ ಶಕ್ತಿ ಸಂಘ, ಹೆಜಮಾಡಿ ಕರಾವಳಿ ಯುವಕ-ಯುವತಿ ವೃಂದ ಮತ್ತು ಉಡುಪಿ ನೆಹರೂ ಯುವ ಕೇಂದ್ರದ ವತಿಯಿಂದ ಹಮ್ಮಿಕೊಂಡ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆದ ಕಾರ್ಯಕ್ರಮದಲ್ಲಿ ಅಮವಾಸ್ಯೆಕರಿಯ ಕಡಲ ಕಿನಾರೆಯಲ್ಲಿ ಸಾಮೂಹಿಕ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಎಸ್ಎಲ್ಆರ್ಎಮ್ ಘಟಕದ ಸಿಬ್ಬಂದಿಗಳಿಗೆ ರೈನ್ಕೋಟ್ ಕಿಟ್ಗಳನ್ನು ವಿತರಿಸಲಾಯಿತು.