ಉಡುಪಿ: ನಗರಸಭೆ ವಾಹನ ಚಾಲಕನ ವಿರುದ್ಧ ಕ್ರಮಕ್ಕೆ ದಸಂಸ ಆಗ್ರಹ
ಉಡುಪಿ, ಜು.29: ಕಾನೂನು ಬಾಹಿರವಾಗಿ ವರ್ತಿಸುತ್ತಿರುವ ಉಡುಪಿ ನಗರಸಭೆಯ ಕಸ ವಿಲೇವಾರಿ ವಾಹನ ಚಾಲಕರೊಬ್ಬರ ವಿರುದ್ಧ ಸೂಕ್ತ ಕ್ರಮ ಜರಗಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೂಡಬೆಟ್ಟು ಗ್ರಾಮಾಂತರ ಸಮಿತಿಯ ವತಿಯಿಂದ ಇತ್ತೀಚೆಗೆ ಜಿಲ್ಲಾಧಿಕಾರಿ ಹಾಗೂ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.
ನಗರಸಭೆ ಕಸವಿಲೇವಾರಿ ವಾಹನದ ಅರೆಕಾಲಿಕ ಚಾಲಕ ಉಪ್ಪೂರಿನ ಸತೀಶ್ ಅಮೀನ್ ನಗರ ಮತ್ತು ಗ್ರಾಪಂ ವ್ಯಾಪ್ತಿಯ ಹೊಟೇಲ್ಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದು, ಬೀದಿ ವ್ಯಾಪಾರಿಗಳಿಂದ ವಶಪಡಿಸಿಕೊಂಡ ಸೊತ್ತುಗಳನ್ನು ನಗರ ಸಭೆಗೆ ಹಸ್ತಾಂತರಿಸದೆ ತನ್ನ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಸಮಿತಿಯ ಪ್ರಧಾನ ಸಂಚಾಲಕ ಶಿವಾನಂದ ಮೂಡಬೆಟ್ಟು ಮನವಿಯಲ್ಲಿ ದೂರಿದ್ದಾರೆ.
ಈ ವ್ಯಕ್ತಿ ಕೆಲವು ಸಂಘಟನೆಯ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಒಕ್ಕೂಟದ ಸದಸ್ಯರು ದಸಂಸಗೆ ದೂರು ನೀಡಿದ್ದಾರೆ. ಅದೇ ರೀತಿ ನಗರಸಭೆ ವಾಹನವನ್ನು ತನ್ನ ಸ್ವಂತ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಆದುದರಿಂದ ಈ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.





