ವೈದ್ಯಕೀಯ ಉಪಕರಣ, ಸುವಿಧಾ ಕ್ಯಾಬಿನ್ ಹಗರಣದಲ್ಲಿ ಅಶ್ವತ್ಥ ನಾರಾಯಣ ಭಾಗಿ: ಆಮ್ ಆದ್ಮಿ ಪಕ್ಷ ಆರೋಪ

ಅಶ್ವತ್ಥ ನಾರಾಯಣ
ಬೆಂಗಳೂರು, ಜು.29: ಕೊರೋನ ನೆಪ ಮಾಡಿಕೊಂಡು ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದಂತ ಭ್ರಷ್ಟಾಚಾರ ನಡೆದಿದೆ. ಸ್ವತಃ ವೈದ್ಯರಾಗಿರುವ, ಅಲ್ಲದೇ ಅನೇಕ ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ ನಾರಾಯಣ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ 2 ಸಾವಿರ ಕೋಟಿ ರೂ.ಗಳಷ್ಟು ಭ್ರಷ್ಟಾಚಾರ ನಡೆಯಲು ಹೇಗೆ ಅನುವು ಮಾಡಿಕೊಟ್ಟರು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಪ್ರಶ್ನಿಸಿದ್ದಾರೆ.
ಬುಧವಾರ ಝೂಮ್ ಆ್ಯಪ್ ಮೂಲಕ ಜಂಟಿ ಸುದ್ದಿಗೋಷ್ಠಿಯನ್ನು ನಡೆಸಿದ ಅವರು, ಅಶ್ವತ್ಥ ನಾರಾಯಣ ಅವರಿಗೆ ಯಾವ ಯಾವ ಉಪಕರಣ ಎಷ್ಟೆಷ್ಟು ಮೌಲ್ಯಕ್ಕೆ ದೊರೆಯುತ್ತದೆ ಎನ್ನುವ ಪ್ರಾಥಮಿಕ ಜ್ಞಾನ ಇದ್ದೇ ಇರುತ್ತದೆ. ಇವರು ಈ ಹಗರಣವನ್ನು ತಡೆಯಬಹುದಿತ್ತು, ಆದರೆ ಈ ವೈದ್ಯಕೀಯ ಪರಿಕರಗಳ ಖರೀದಿ ಹಗರಣದಿಂದ ಕರ್ನಾಟಕದ ಮಾನ ರಾಷ್ಟ್ರ ಮಟ್ಟದಲ್ಲಿ ಹರಾಜಾಗಿದೆ, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಎಂದರು.
ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಯಡಿಯೂರಪ್ಪ, ಹಿಂದಿನ ಕಾಂಗ್ರೆಸ್ ಸರಕಾರ ಹಾಳು ಮಾಡಿದ ಲೋಕಾಯುಕ್ತ ಸಂಸ್ಥೆಯನ್ನು ‘ನಾನು ಕೇವಲ 24 ಗಂಟೆಯಲ್ಲಿ ಮರಳಿ ತರುವೆ’ ಎಂದು ವೀರಾವೇಶದಿಂದ ಹೇಳಿದ್ದರು. ಆದರೆ ಈ ಮಿಶ್ರತಳಿ ಸರಕಾರ 1 ವರ್ಷ ಪೂರೈಸುವ ಹೊತ್ತಿಗಾಗಲೇ ಜನರ ತೆರಿಗೆ ಹಣವನ್ನು ನುಂಗಿ ನೀರು ಕುಡಿಯಲು ಪ್ರಾರಂಭಿಸಿದೆ, ಲೋಕಾಯುಕ್ತವನ್ನು ಮರೆತಿದೆ ಎಂದು ಜಗದೀಶ್ ಸದಂ ಆರೋಪಿಸಿದರು.
ಕೆಲವು ದಿನಗಳ ಹಿಂದೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ವರ್ಗಾವಣೆ ಮಾಡಿ, ಅವರ ಮೇಲೆ ಬೆಂಗಳೂರು ಅಂತರ್ ರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಸ್ಥಾಪಿಸಿರುವ ಬೃಹತ್ ಆರೈಕೆ ಕೇಂದ್ರಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಯಲ್ಲಿ ಆದ ಭ್ರಷ್ಟಾಚಾರದ ಆರೋಪ ಹೊರಿಸಲಾಯಿತು. ಈ ಹಗರಣದ ಬಗ್ಗೆ ಮುಖ್ಯಮಂತ್ರಿಗಳೇ ನೇರವಾಗಿ ಪ್ರಸ್ತಾಪ ಮಾಡಿದ್ದರೂ, ಒಬ್ಬ ಅಧಿಕಾರಿ ಇಷ್ಟೊಂದು ಬೃಹತ್ ಪ್ರಮಾಣದ ಹಗರಣವನ್ನು ಯಾವುದೇ ರಾಜಕಾರಣಿಗಳ ಕುಮ್ಮಕ್ಕಿಲ್ಲದೇ, ರಕ್ಷಣೆ ಇಲ್ಲದೇ ನಡೆಸಲು ಸಾಧ್ಯವಿಲ್ಲ. ಈ ಹಗರಣದ ಹಿಂದೆ ಇರುವುದು ಡಿಸಿಎಂ ಅಶ್ವತ್ಥ ನಾರಾಯಣ ಅವರೇ ಎಂದು ಅವರು ಆರೋಪಿಸಿದರು.
ಬಿಜೆಪಿ ಸರಕಾರ ವೈದ್ಯಕೀಯ ಉಪಕರಣಗಳ ಜತೆಗೆ ಇತರೇ ಕಣ್ಣಿಗೆ ಕಾಣದ ಸಾಕಷ್ಟು ಹಗರಣಗಳನ್ನು ನಡೆಸಿದೆ, ಇದೆಲ್ಲದರ ಹಿಂದೆ ಅಶ್ವಥ ನಾರಾಯಣ ಇದ್ದಾರೆ. ಈ ಹಗರಣದಲ್ಲಿ ತಮ್ಮ ಹಸ್ತಕ್ಷೇಪ ಇಲ್ಲದಿದ್ದರೆ, ಈ ಕೂಡಲೇ ರಾಜೀನಾಮೆ ಕೊಡಲಿ ಹಾಗೂ ತನಿಖೆಗೆ ಸಹಕರಿಸಲಿ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಆಗಲಿ ಎಂದು ಜಗದೀಶ್ ಸದಂ ಆಗ್ರಹಿಸಿದರು.
ಸುವಿಧಾ ಕ್ಯಾಬಿನ್ ಹೆಸರಿನಲ್ಲಿ ಮತ್ತೊಂದು ಹಗರಣ: ಪೌರ ಕಾರ್ಮಿಕರಿಗೆ ಸುವಿಧಾ ಕ್ಯಾಬಿನ್ ಸ್ಥಾಪಿಸುವ ಹೆಸರಿನಲ್ಲಿ ಬೇನಾಮಿ ಕಂಪೆನಿಗೆ 16 ಕೋಟಿ ರೂ.ಮೌಲ್ಯದ ಗುತ್ತಿಗೆ ನೀಡಲು ಹೊರಟಿರುವುದರ ಹಿಂದೆ ಅಶ್ವಥ ನಾರಾಯಣ ಅವರೂ ಇದ್ದಾರೆ ಎಂದು ಪಕ್ಷದ ಮುಖಂಡ ಶರತ್ ಖಾದ್ರಿ ಆರೋಪ ಮಾಡಿದರು.
20 ಅಡಿ ಉದ್ದ, 8.5 ಅಡಿ ಅಗಲ, 8 ಅಡಿ ಎತ್ತರದ ಈ ಕ್ಯಾಬೀನ್ನಲ್ಲಿ ಪೌರ ಕಾರ್ಮಿಕರಿಗೆ ಪ್ರತ್ಯೇಕ ಶೌಚಾಲಯ, ಊಟ ಮಾಡಲು ಹಾಗೂ ಬಟ್ಟೆ ಬದಲಾಯಿಸಲು ಸ್ಥಳಾವಕಾಶ ನೀಡುವುದು ಇದರ ಉದ್ದೇಶ. ಆದರೆ, ಮಾರುಕಟ್ಟೆ ದರದಲ್ಲಿ ಈ ಕ್ಯಾಬಿನ್ ಗಳನ್ನು ತಯಾರಿಸಲು ಸುಮಾರು 80 ಸಾವಿರ ರೂ.ಖರ್ಚಾಗುತ್ತದೆ. ಆದರೆ ಯಾವುದೇ ಅನುಭವವೇ ಇಲ್ಲದ ಹಾಗೂ ಅಸ್ತಿತ್ವವೇ ಇಲ್ಲದ ಸಂಸ್ಥೆಯಾದ ಆಗ್ರ್ಯಾ ಇನ್ಫ್ರಾಟೆಕ್ ಸಂಸ್ಥೆ ಒಂದು ಕ್ಯಾಬೀನ್ಗೆ 8 ಲಕ್ಷ ರೂ.ಎಂದು ದರ ನಿಗದಿ ಮಾಡಿ ಪೂರೈಸಲು ಮುಂದಾಗಿದೆ. ಇದರ ಹಿಂದಿನ ಹುನ್ನಾರ ಏನು ಎಂದು ಅವರು ಪ್ರಶ್ನಿಸಿದರು.
ಕೇವಲ ಬಾಯಿ ಮಾತಿನಲ್ಲಿ ಪೌರ ಕಾರ್ಮಿಕರ ಬಗ್ಗೆ ಉಪಚಾರ ತೋರಿಸಿ ಬೆನ್ನಿಗೆ ಚೂರಿ ಇರಿಯುವ ಕೆಲಸ ನಡೆಯುತ್ತಿದೆ. ಈ ಭ್ರಷ್ಟಾಚಾರದಲ್ಲಿ ತೊಡಗಿರುವ ಅಶ್ವಥ ನಾರಾಯಣ ಅವರೇ ಸ್ವತಃ ಮುಂದೆ ಬಂದು ರಾಜೀನಾಮೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷ ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಆಗ್ರಹಿಸಿದರು.







