ಅಮಾನ್ಯ ನೋಟುಗಳ ಚಲಾವಣೆ ದಂಧೆ: ಮೂವರು ಆರೋಪಿಗಳ ಬಂಧನ
![ಅಮಾನ್ಯ ನೋಟುಗಳ ಚಲಾವಣೆ ದಂಧೆ: ಮೂವರು ಆರೋಪಿಗಳ ಬಂಧನ ಅಮಾನ್ಯ ನೋಟುಗಳ ಚಲಾವಣೆ ದಂಧೆ: ಮೂವರು ಆರೋಪಿಗಳ ಬಂಧನ](https://www.varthabharati.in/sites/default/files/images/articles/2020/07/29/253079-1596039838.jpg)
ಬೆಂಗಳೂರು, ಜು.29: ಅಮಾನ್ಯೀಕರಣಗೊಂಡಿರುವ ಗರಿಷ್ಠ ಮುಖಬೆಲೆಯ ನೋಟುಗಳನ್ನು ಚಲಾವಣೆ ಮಾಡಿಕೊಡುವುದಾಗಿ ಹಾಗೂ ಕಮಿಷನ್ ನೀಡುವುದಾಗಿ ನಂಬಿಸಿ ದಂಧೆ ನಡೆಸುತ್ತಿದ್ದ ಆರೋಪದಡಿ ಮೂವರನ್ನು ಇಲ್ಲಿನ ಉತ್ತರ ವಿಭಾಗದ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ನಗರದ ನಿವಾಸಿಗಳಾದ ಕಿರಣ್ ಕುಮಾರ್, ಪ್ರವೀಣ್ ಕುಮಾರ್ ಹಾಗೂ ಪವನ್ ಕುಮಾರ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ನಗರದ ಜಾಲಹಳ್ಳಿಯ ಎಚ್ಎಂಟಿ ಸರ್ವೀಸ್ ರಸ್ತೆಯಲ್ಲಿನ ಅಪಾರ್ಟ್ ಮೆಂಟ್ವೊಂದರ ಬಳಿ ಕಾರಿನಲ್ಲಿ ದುಷ್ಕರ್ಮಿಗಳು, ಅಮಾನ್ಯೀಕರಣವಾಗಿರುವ 1 ಸಾವಿರ ಮುಖ ಬೆಲೆಯ ಹಳೇ ನೋಟುಗಳನ್ನು ಕೊಟ್ಟರೆ, ಹೆಚ್ಚು ಕಮಿಷನ್ ಕೊಡುವುದಾಗಿ ಸಾರ್ವಜನಿಕರಿಗೆ ನಂಬಿಸುತ್ತಿದ್ದು. ಈ ಕುರಿತಂತೆ ಮಾಹಿತಿ ಪಡೆದ ಉತ್ತರ ವಿಭಾಗದ ಜಾಲಹಳ್ಳಿ ಠಾಣಾ ಪೊಲೀಸರು, ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಸುಮಾರು 30 ಲಕ್ಷ ರೂ. ಹಣ ಜಪ್ತಿ ಮಾಡಿದ್ದಾರೆ.
ರಿಸರ್ವ್ ಬ್ಯಾಂಕ್ನಲ್ಲಿ ಅಧಿಕಾರಿಗಳು ಪರಿಚಯ ಇದ್ದು, ತಮಗೆ 1 ಸಾವಿರದ ಹಳೇ ನೋಟು ಕೊಟ್ಟರೆ ಅದಕ್ಕೆ ಪ್ರತಿಯಾಗಿ 400 ಹೊಸ ನೋಟು ನೀಡುವುದಾಗಿ ಆರೋಪಿಗಳು ಸಾರ್ವಜನಿಕರಿಗೆ ನಂಬಿಸುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ತನಿಖೆ ಮುಂದುವರಿಸಲಾಗಿದೆ.