ಟಿಪ್ಪು ಪಠ್ಯ ಕೈಬಿಡುವ ರಾಜ್ಯ ಸರ್ಕಾರದ ಕ್ರಮಕ್ಕೆ ಶಾಸಕ ತನ್ವೀರ್ ಸೇಠ್ ಆಕ್ರೋಶ
ಮೈಸೂರು,ಜು.29: ಶಾಲಾ ಪಠ್ಯ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಪಠ್ಯ ಕೈಬಿಡುವ ರಾಜ್ಯ ಸರ್ಕಾರದ ಕ್ರಮಕ್ಕೆ ವಿರುದ್ಧ ಶಾಸಕ ತನ್ವೀರ್ ಸೇಠ್ ಆಕ್ರೋಶ ಹೊರ ಹಾಕಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಪ್ಪು ಒಂದು ಸಮುದಾಯಕ್ಕೆ ಸೀಮಿತವಲ್ಲ. ಟಿಪ್ಪು ಮತ್ತು ಶೃಂಗೇರಿ ಮಠಕ್ಕೂ ಸಂಬಂಧ ಇದೆ. ಬಡವರ ಮೇಲಿನ ಭೂ ಸುಧಾರಣೆ ಮೇಲಿನ ಪ್ರಭಾವ, ಸಾರಾಯಿ ನಿಷೇಧ, ಆಡಳಿತ ವ್ಯವಸ್ಥೆಯಲ್ಲಿ ತಂದ ಸುಧಾರಣೆ, ಖಾತಾ, ಪಹಣಿ, ಸಾಕಷ್ಟು ಸುಧಾರಣೆಗಳನ್ನು ತಂದ ಹೆಗ್ಗಳಿಕೆ ಟಿಪ್ಪುವಿನದ್ದು. ಟಿಪ್ಪು ಬಗ್ಗೆ ಓದುವ ಎಲ್ಲರಿಗೂ ಈ ನಿರ್ಣಯ ನೋವುಂಟು ಮಾಡಿದೆ. ಬಿಜೆಪಿಯಿಂದ ಟಿಪ್ಪು ಜಯಂತಿ ನಿಲ್ಲಿಸುವ ಬಗ್ಗೆ ಗೊತ್ತಿತ್ತು. ಆದರೆ ಟಿಪ್ಪುವಿನ ಪಠ್ಯದ ಬಗ್ಗೆ ನಾವು ಯೋಚಿಸಿರಲಿಲ್ಲ. ನಿಜವಾಗಿಯೂ ಬಿಜೆಪಿಯಿಂದ ಈ ನಡೆ ನಾವು ಅಂದುಕೊಂಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂಬಂಧ ಹೋರಾಟ ಮಾಡುವುದಕ್ಕೆ ನಮಗೆ ಸದ್ಯ ಸಮಸ್ಯೆ ಇಲ್ಲ. ಆದರೆ ಸರಿಯಾದ ಮಾರ್ಗದಲ್ಲಿ ಹೋಗಿ ಹೋರಾಟ ಮಾಡುತ್ತೇವೆ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಪತ್ರವನ್ನು ಬರೆದಿದ್ದೇನೆ. ಬರಗೂರು ರಾಮಚಂದ್ರಪ್ಪ ಅವರು ಕೂಡ ಪಠ್ಯ ತೆಗೆಯೋದು ಆಗಲ್ಲ ಎಂದಿದ್ದರು. ಪಠ್ಯ ಸಮಿತಿಯ ಆದೇಶ ನಿರ್ಣಯಕ್ಕೆ ಬಿಜೆಪಿ ಬೆಲೆ ಬೆಲೆ ಕೊಡುತ್ತಿಲ್ಲ. ಬಿಜೆಪಿ ಏಕಪಕ್ಷೀಯವಾಗಿ ಸರ್ವಾಧಿಕಾರದ ಧೋರಣೆ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಟಿಪ್ಪು ಹೆಸರಿನಲ್ಲಿ ರಾಜಕಾರಣ ಮಾಡಲು ಶುರು ಮಾಡಿದೆ. ಈಗಾಗಲೇ ಕೊರೋನದಿಂದ ಶೇ.30 ರಷ್ಟು ಪಾಠ ಕಡಿಮೆ ಮಾಡುತ್ತಿದೆ. ಇದರಲ್ಲಿ ಟಿಪ್ಪು ಪಠ್ಯ ತೆಗೆಯುವಂತದ್ದು ಸರಿಯಲ್ಲ. ಸರ್ಕಾರ ಟಿಪ್ಪು ಜಯಂತಿ ಮಾಡುವಾಗಲೂ ರಜೆ ಬೇಡ ಎಂದ ಸಮುದಾಯ ನಮ್ಮದು. ಟಿಪ್ಪು ಮೈಸೂರು ಭಾಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇವತ್ತಿಗೂ ಅವರು ಕಂಡು ಹಿಡಿದ ರಾಕೆಟ್ ನಾಸಾದಲ್ಲಿ ಪ್ರದರ್ಶನವಾಗಿದೆ. ಆದರೆ ಇತಿಹಾಸ ತಿರುಚುವ ಕೆಲಸ ಮಾಡಬೇಡಿ. ಈ ಸಂದರ್ಭದಲ್ಲಿ ರಾಜಕಾರಣ ಮಾಡೋದು ಬೇಡ. ವಿನಾಕಾರಣ ಇದಕ್ಕೆ ಬೇರೆ ಬೇರೆ ಬಣ್ಣ ಕಟ್ಟೋದು ಸರಿಯಲ್ಲ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಬಿಜೆಪಿ ಸರ್ಕಾರ ಇದನ್ನು ಮತ್ತೊಮ್ಮೆ ಪರಿಶೀಲನೆ ನಡೆಸಲಿ ಎಂದು ಸಲಹೆ ನೀಡಿದರು.