ಮೀನು ಕೃಷಿಕರಿಗೆ ವೈಜ್ಞಾನಿಕ ಮಾಹಿತಿಯ ಸರಳ ಕೈಪಿಡಿ ಬಿಡುಗಡೆ
ಮಂಗಳೂರು, ಆ.1: ಶಿಕ್ಷಣದ ಜತೆ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ಮುಂಚೂಣಿ ಹೊಂದಿರುವ ಮಂಗಳೂರಿನ ಮೀನುಗಾರಿಕಾ ಕಾಲೇಜು ರೈತರಿಗೆ ತಂತ್ರಜ್ಞಾನಗಳ ವರ್ಗಾವಣೆ ಮಾಡುವಲ್ಲಿ ಸಹಾಯವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅದರ ಭಾಗವಾಗಿ ಮೀನು ಕೃಷಿಕರಿಗೆ ಅನುಕೂಲವಾಗುವಂತಹ ಮೀನುಗಾರಿಕಾ ಮಹಾವಿದ್ಯಾಲಯದ ಪ್ರೊ.ಡಾ. ಎ.ಟಿ. ರಾಮಚಂದ್ರ ನಾಯ್ಕ ತಯಾರಿಸಿದ ವೈಜ್ಞಾನಿಕ ಮಾಹಿತಿಯ ಸರಳ ಕೈಪಿಡಿಯನ್ನು ಬೀದರ್ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಚ್.ಡಿ. ನಾರಾಯಣಸ್ವಾಮಿ ಕೈಪಿಡಿಯನ್ನು ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು ರೈತರಿಗೆ ಅತಿ ಸರಳವಾಗಿ ಅರ್ಥವಾಗುವ ಕನ್ನಡ ಭಾಷೆಯಲ್ಲಿ ಮುದ್ರಿತವಾಗಿರುವ ಈ ಕಿರುಹೊತ್ತಿಗೆಗಳು ವೈಜ್ಞಾನಿಕ ವಿಧಾನದಲ್ಲಿ ಕೃಷಿ ಮಾಡಲು ಸಹಕಾರಿಯಾಗಲಿವೆ ಎಂದರು.
ಕಾಲೇಜಿನ ಡೀನ್ ಡಾ. ಎ.ಸೆಂಥಿಲ್ ವೆಲ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವಿವಿ ಹಣಕಾಸು ನಿಯಂತ್ರಣಾಧಿಕಾರಿ ಡಾ.ಸಿ.ವಿ.ರಾಜು, ಕಾಲೇಜಿನ ಎಸ್ಸಿಎಸ್ಪಿ/ಟಿಎಸ್ಪಿ ಯೋಜನೆಯ ಸಂಯೋಜಕ ಶಶಿಧರ್ ಎಸ್. ಬಾದಾಮಿ ಮತ್ತು ಕಾಲೇಜಿನ ವಿವಿಧ ವಿಭಾಗಗಳ ಭೋದಕ ಹಾಗೂ ಭೋದಕೇತರ ಸಿಬ್ಬಂದಿ ಉಪಸ್ಥಿತರಿದ್ದರು.