ಮನಪಾ ಆಯುಕ್ತರಿಗೆ ವರ್ಗಾವಣೆ
ಮಂಗಳೂರು, ಆ.5: ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅವರಿಗೆ ಬುಧವಾರ ದಿಢೀರ್ ವರ್ಗಾವಣೆಯಾಗಿದೆ. ಅವರ ಸ್ಥಾನಕ್ಕೆ ಯಾರನ್ನೂ ನೇಮಿಸಿಲ್ಲ.
ಅಜಿತ್ ಕುಮಾರ್ ಹೆಗ್ಡೆ ಅವರಿಗೆ ಆಲಮಟ್ಟಿ ಕೃಷ್ಣಭಾಗ್ಯ ಜಲ ನಿಗಮದ ಪ್ರಭಾರ ಮುಖ್ಯ ಲೆಕ್ಕಾಧಿಕಾರಿ ಹುದ್ದೆಗೆ ವರ್ಗಾಯಿಸಲಾಗಿದೆ.
ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅವರಿಗೆ ಕೊರೋನ ಪಾಸಿಟಿವ್ ಕಾಣಿಸಿಕೊಂಡ ಬಳಿಕ ವಿಶ್ರಾಂತಿಯಲ್ಲಿದ್ದರು. ಮುಡಾ ಆಯುಕ್ತ ದಿನೇಶ್ ಅವರು ಮನಪಾ ಆಯುಕ್ತ ಹುದ್ದೆಯ ಪ್ರಭಾರ ವಹಿಸಿದ್ದರು.
ಬೀಳ್ಕೊಡುಗೆ: ದಿಢೀರ್ ವರ್ಗಾವಣೆಯ ಬೆನ್ನಿಗೆ ಮನಪಾ ಸಭಾಂಗಣದಲ್ಲಿ ಬುಧವಾರ ಬೀಳ್ಕೊಡುಗೆ ಕಾರ್ಯಕ್ರಮವೂ ಜರುಗಿದೆ. ಮೇಯರ್ ದಿವಾಕರ್, ಉಪಾಯುಕ್ತ ಡಾ. ಸಂತೋಷ್ ಕುಮಾರ್ ಮತ್ತಿತರರು ಈ ಸಂದರ್ಭ ಪಾಲ್ಗೊಂಡಿದ್ದರು.
Next Story