ಚಿಕ್ಕಮಗಳೂರಿನಲ್ಲಿ ಮುಂದಿನ ವರ್ಷ ಸರಕಾರಿ ಎಂಜಿನಿಯರಿಂಗ್ ಕಾಲೇಜು: ಡಾ.ಸಿ.ಎನ್.ಅಶ್ವತ್ಥ ನಾರಾಯಣ

ಬೆಂಗಳೂರು, ಆ.5: ಚಿಕ್ಕಮಗಳೂರು ನಗರದಲ್ಲಿ ಮುಂದಿನ ವರ್ಷದಿಂದ ಸರಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡದ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮ ತೆಗೆದುಕೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವರೂ ಅದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.
ಬುಧವಾರ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಜತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2012ರಲ್ಲೆ ಚಿಕ್ಕಮಗಳೂರಿನಲ್ಲಿ ಸರಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಲು ತೀರ್ಮಾನಿಸಲಾಗಿತ್ತು ಎಂದರು.
ಈ ಯೋಜನೆಗೆ 26 ಕೋಟಿ ರೂಪಾಯಿ ನೀಡುವಂತೆ ನಬಾರ್ಡ್ಗೂ ಮನವಿ ಸಲ್ಲಿಸಲಾಗಿತ್ತು. ನಂತರ ನಬಾರ್ಡ್ ಅನುಮೋದನೆ ನೀಡಿರಲಿಲ್ಲ. ಇದರ ನಂತರ ರೂಸಾ ಯೋಜನೆಯಡಿ ಹಣ ಮಂಜೂರು ಮಾಡುವಂತೆ ಪ್ರಸ್ತಾವ ಸಲ್ಲಿಸಿದ್ದಾಗಲೂ ಒಪ್ಪಿಗೆ ಸಿಕ್ಕಿರಲಿಲ್ಲ. ಇದನ್ನು ಸದ್ಯ 58 ಕೋಟಿ ರೂ.ಗಳಿಗೆ ಪರಿಷ್ಕರಿಸಿದ್ದು ಇದಕ್ಕೆ ಒಪ್ಪಿಗೆ ನೀಡಬೇಕು ಸಿ.ಟಿ.ರವಿ ಮನವಿ ಮಾಡಿದರು.
ಪ್ರಸಕ್ತ ಸಾಲಿನಲ್ಲಿ ಹಣದ ಕೊರತೆ ಇರುವ ಕಾರಣ ಮುಂದಿನ ವರ್ಷ ಕೈಗೆತ್ತಿಕೊಳ್ಳಲಾಗುವುದು. ಈ ನಡುವೆ ಕೇಂದ್ರ ಸರಕಾರದಿಂದಲೂ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಜಿಟಿಟಿಸಿಗೆ ಆದ್ಯತೆ: ಚಿಕ್ಕಮಗಳೂರಿನಲ್ಲಿ ಸರಕಾರಿ ಉಪಕರಣಗಾರ ಮತ್ತು ತರಬೇತಿ ಸಂಸ್ಥೆ (ಜಿಟಿಟಿಸಿ)ಗೆ ನಾಲ್ಕು ಎಕರೆ ಜಾಗ ಮೀಸಲಿದ್ದು ತಕ್ಷಣ ಅದನ್ನು ಆರಂಭಿಸಬೇಕು ಎನ್ನುವ ಮನವಿಗೆ ಪರಿಶೀಲಿಸುವ ಭರವಸೆಯನ್ನು ನೀಡಿದ ಡಿಸಿಎಂ, ಒಂದು ಜಿಟಿಟಿಸಿ ಸಂಸ್ಥೆ ಸ್ಥಾಪಿಸಲು 40 ಕೋಟಿ ರೂಪಾಯಿ ಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಇದನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದರು.
ಕುವೆಂಪು ವಿವಿ ಕ್ಯಾಂಪಸ್: ಚಿಕ್ಕಮಗಳೂರಿನಲ್ಲಿ ಕುವೆಂಪು ವಿವಿಯ ಕ್ಯಾಂಪಸ್ ನಿರ್ಮಾಣಕ್ಕೆ ತಕ್ಷಣ ಚಾಲನೆ ನೀಡಬೇಕು ಎಂದು ಸಭೆಯಲ್ಲಿ ಹಾಜರಿದ್ದ ವಿವಿ ಕುಲಪತಿ ಡಾ.ವೀರಭದ್ರಪ್ಪಗೆ ಉಪ ಮುಖ್ಯಮಂತ್ರಿ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವೀರಭದ್ರಪ್ಪ, ಒಟ್ಟು 378 ಕೋಟಿ ರೂಪಾಯಿ ಅಂದಾಜು ವೆಚ್ಚದ ಕಾಮಗಾರಿಗಳಿಗೆ ವಿಶ್ವವಿದ್ಯಾಲಯ ಯೋಜನೆ ರೂಪಿಸಿದೆ. ಸರಕಾರದಿಂದ ಹಣಕಾಸಿನ ನೆರವು ಕೊಡಿಸುವಂತೆ ಕೋರಿದರು.
ಆದರೆ, ಇದಕ್ಕೆ ವಿಶ್ವವಿದ್ಯಾಲಯದಿಂದಲೇ ಹಣ ಭರಿಸಬೇಕು ಎಂದು ಅಶ್ವತ್ಥ ನಾರಾಯಣ ಸೂಚಿಸಿದರು. ಅಲ್ಲದೆ, ಹಂತ ಹಂತವಾಗಿ ಕಾಮಗಾರಿ ಆರಂಭಿಸುವಂತೆ ತಿಳಿಸಿದರು.







