ಭಾರೀ ಮಳೆ: ಅಜಿಲಮೊಗರು ಮಸೀದಿ ಆವರಣಕ್ಕೆ ನುಗ್ಗಿದ ನದಿ ನೀರು
ಬಂಟ್ವಾಳ, ಆ.8: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಅವ್ಯಾಹತವಾಗಿ ಸುರಿಯುತ್ತಿದ್ದು, ಶನಿವಾರ ಬೆಳಗ್ಗೆಯೂ ಗಾಳಿ, ಮಳೆ ಮುಂದುವರಿದ ಕಾರಣ ಕಡೇಶಿವಾಲಯ, ಅಜಿಲಮೊಗರು ಮಧ್ಯೆ ಹರಿಯುವ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ. ಇಂದು ಬೆಳಗ್ಗೆ ಆರು ಗಂಟೆ ಸುಮಾರಿಗೆ ಅಜಿಲಮೊಗರು ಮಸೀದಿ ಆವರಣಕ್ಕೂ ನದಿ ನೀರು ನುಗ್ಗಿದೆ.
ಇಲ್ಲಿನ ಸಮೀಪದ ರಸ್ತೆಯಲ್ಲೆಲ್ಲಾ ನದಿ ನೀರು ಹರಿಯುತ್ತಿದ್ದು, ಸಮೀಪದ ಮನೆಗಳ ಅಂಗಳಕ್ಕೂ ನೆರೆ ನೀರು ನುಗ್ಗಿದೆ. ಪ್ರತಿ ವರ್ಷ ಮಳೆ ಬಂದಾಗಲೂ ಅಜಿಲಮೊಗರು ಮಸೀದಿ ಆವರಣ ಪ್ರದೇಶ ಜಲಾವೃತಗೊಳ್ಳುತ್ತದೆ. ಕಳೆದ ವರ್ಷ ಆ.9ರಂದು ಪೂರ್ವಾಹ್ನ ಇದೇರೀತಿ ನೇತ್ರಾವತಿ ನದಿ ದಡ ಮೀರಿ ಹರಿದಿತ್ತು. ಅಂದು 11:30ರ ಸುಮಾರಿಗೆ ಅಜಿಲಮೊಗರು ಮಸೀದಿ ಆವರಣಕ್ಕೂ ನೀರು ನುಗ್ಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಫೋಟೊ: ತ್ವಾಹಾ ಸಅದಿ