ಬೆಳ್ತಂಗಡಿಯಲ್ಲಿ ದಡ ಮೀರಿ ಹರಿಯುತ್ತಿರುವ ನೇತ್ರಾವತಿ: ಹಲವೆಡೆ ತೋಟಗಳಿಗೆ ನುಗ್ಗಿದ ನೆರೆ ನೀರು
ಬೆಳ್ತಂಗಡಿ, ಆ.8: ಸತತ ಮಳೆಯಿಂದಾಗಿ ನೇತ್ರಾವತಿ ನದಿ ದಡಮೀರಿ ಹರಿಯುತ್ತಿದ್ದು ಹಲವೆಡೆ ತೋಟಗಳಿಗೆ ನೀರು ನುಗ್ಗಿದೆ. ಮಲವಂತಿಗೆ ಗ್ರಾಮ, ದಿಡುಪೆಯ ಕಲ್ಬೆಟ್ಟು ಸುತ್ತಮುತ್ತ ಪರಿಸರದ ಕೃಷಿ ಭೂಮಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಕೊಲ್ಲಿ ದೇವಸ್ಥಾನದಿಂದ ದಿಡುಪೆಗೆ ಸಂಪರ್ಕ ಕಲ್ಪಿಸುವ ನೇತ್ರಾವತಿ ಕಿನಾರೆಯ ಕಲ್ಬೆಟ್ಟು ಎಂಬಲ್ಲಿನ ಸೇತುವೆ ಮತ್ತು ಸಂಪರ್ಕ ರಸ್ತೆಗೆ ಹಾನಿಯಾಗಿದೆ. ಕಲ್ಬೆಟ್ಟು ಸಂಪರ್ಕ ಸೇತುವೆ ಸಾರ್ವಜನಿಕರಿಗೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಇಲ್ಲಿ ಸುಮಾರು 100ರಿಂದ 150ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ.
ಮಲವಂತಿಗೆ ಗ್ರಾಮದ ಕಲ್ಬೆಟ್ಟು ಆನಂದ ಗೌಡ, ಜಯವರ್ಮ ಗೌಡ ಹಾಗೂ ಕುಂಜಣ್ಣ ಮತ್ತು ರಾಮಣ್ಣ ಗೌಡ, ಆನಂದ ಗೌಡ ಸೇರಿದಂತೆ ಹಲವು ಜನರ ತೋಟಕ್ಕೆ ನೇತ್ರಾವತಿಯ ನದಿಯ ನೀರು ನುಗ್ಗಿದ್ದುಮ ಕೃಷಿಗೆ ಹಾನಿಯಾಗಿದೆ.
ಹಲವು ಪ್ರದೇಶಗಳಲ್ಲಿ ನೀರು ನುಗ್ಗಿರುವುದರಿಂದ ತಾಲೂಕು ಆಡಳಿತ ಅಲ್ಲಿ ವಾಸಿಸುತ್ತಿರುವ ಜನರ ಸ್ಥಳಾಂತರಕ್ಕೆ ಸೂಚನೆ ನೀಡಿದೆ. ಚಾರ್ಮಾಡಿ ರಸ್ತೆಯ ಮುಂಡಾಜೆ ಸೀಟು ಬಳಿ ಮರವೊಂದು ರಸ್ತೆಗುರುಳಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ. ಬೆಳ್ತಂಗಡಿ ತಾಲೂಕಿನ ಅಗ್ಗಪಾಲು ಸಮೀಪ ನದಿ ನೀರು ಮನೆಗಳಿಗೆ ನುಗ್ಗಿದ್ದು ಆತಂಕಕ್ಕೆ ಎಡೆಮಾಡಿದೆ.