ದ.ಕ. ಜಿಲ್ಲಾ ಕಾಂಗ್ರೆಸ್ನಿಂದ ‘ಭಾರತ ಬಿಟ್ಟು ತೊಲಗಿ ಚಳವಳಿ’ಯ ಕಾರ್ಯಕ್ರಮ
ಮಂಗಳೂರು, ಆ.9: ‘ಭಾರತ ಬಿಟ್ಟು ತೊಲಗಿ ಚಳವಳಿ’ಯ 78ನೇ ವರ್ಷಾಚರಣೆಯ ಕಾರ್ಯಕ್ರಮವು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ರ ಅಧ್ಯಕ್ಷತೆಯಲ್ಲಿ ರವಿವಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಶತಮಾನದಿಂದ ನಡೆಯುತ್ತಾ ಬಂದ ಸ್ವಾತಂತ್ರ್ಯ ಸಮರ ತಿವ್ರಗೊಂಡಿದ್ದ ಕಾಲವದು. ತ್ರಿವರ್ಣ ಧ್ವಜದಡಿ ಎಲ್ಲರೂ ಒಗ್ಗೂಡಿ, ದೇಶದಿಂದ ಪರಕೀಯರನ್ನು ಮೂಲೊತ್ಪಾಟಿಸಲು ಸಿದ್ಧರಾದ ಸಮಯವದು. ಇಂದಿಗೆ ಸರಿಯಾಗಿ 78 ವರ್ಷಗಳ ಹಿಂದೆ ಅಂದರೆ 1942ರ ಆ.9ರಂದು ನಡೆದ ಕ್ವಿಟ್ ಇಂಡಿಯಾ ಚಳವಳಿಯು ನಾಯಕರೇ ಇಲ್ಲದೆ ಉಗ್ರ ಸ್ವರೂಪ ಪಡೆದಿತ್ತು. ಆಂದೊಲನ ಆರಂಭವಾದ ಐದೇ ವರ್ಷದಲ್ಲಿ ಭಾರತ ಸ್ವತಂತ್ರವಾಯಿತು ಎಂದು ವಿವರಿಸಿದರು.
ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಕಾಂಗ್ರೆಸ್ ಪಕ್ಷ ದೊಡ್ಡ ಪಾತ್ರ ವಹಿಸಿದೆ. ಜಾತ್ಯತೀತ ಸಿದ್ಧಾಂತದ ಬಗ್ಗೆ ಇನ್ನೊಬ್ಬರು ಮಾತನಾಡಬೇಕಿಲ್ಲ. ಭಾರತ ಬಿಟ್ಟು ತೊಲಗಿ ಚಳವಳಿಯೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಖ್ಯವಾಗಿತ್ತು ಎಂದು ರಮಾನಾಥ ರೈ ಬಣ್ಣಿಸಿದರು.
ಡಿಸಿಸಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮಾತನಾಡಿ 1942ರಲ್ಲಿ ಗಾಂಧೀಜಿ ಪ್ರಾರಂಭಿಸಿದ ಕ್ವಿಟ್ ಇಂಡಿಯಾ ಚಳವಳಿಯೂ ಸ್ವಾತಂತ್ರ ಲಭಿಸಿಸುವುದಕ್ಕೆ ಮಾಡಿದ ಕೊನೆ ಅಸ್ತ್ರವಾಗಿತ್ತು. ದೇಶದ ಜನರಿಗೆ ಸ್ವಾತಂತ್ರ್ಯ ಸಿಗಲೇಬೇಕು ಹಾಗೂ ಬ್ರಿಟಿಷರನ್ನು ತೊಲಗಿಸಬೇಕೆಂಬುದು ಗಾಂಧೀಜಿಯ ಉದ್ದೇಶವಾಗಿತ್ತು. ಈ ಚಳವಳಿಯಲ್ಲಿ ಅನೇಕ ನಾಯಕರು, ಪ್ರಜೆಗಳು ಭಾಗವಹಿಸುವ ಮೂಲಕ ಯಶಸ್ವಿಯಾಯಿತು ಎಂದರು.
ಕಾರ್ಯಕ್ರಮದಲ್ಲಿ ಶಶಿಧರ್ ಹೆಗ್ಡೆ, ವಿಶ್ವಾಸ್ ಕುಮಾರ್ ದಾಸ್, ಶುಭೋಧಯ ಆಳ್ವ, ಮೋಹನ್ ಗೌಡ, ಕುಮಾರಿ ಅಪ್ಪಿ, ಕೇಶವ ಮರೋಳಿ, ಪ್ರಕಾಶ್ ಸಾಲಿಯಾನ್, ಟಿ.ಕೆ.ಶೈಲಜಾ, ಬಿ.ಎಂ. ಅಬ್ಬಾಸ್ ಅಲಿ, ವಿವೇಕ್ ರಾಜ್ ಪನಾಮ, ನೀರಜ್ಚಂದ್ರ ಪಾಲ್, ಟಿ.ಕೆ.ಸುಧೀರ್, ಚಂದ್ರಶೇಖರ ಪೂಜಾರಿ, ಪ್ರೇಮ್ ಬಳ್ಳಾಲ್ಬಾಗ್, ಭಾಸ್ಕರ್ ರಾವ್, ಮಂಜುಳಾ ನಾಯ್ಕ್, ಸುರೇಶ್ ಶೆಟ್ಟಿ, ರಘುರಾಜ್ ಕದ್ರಿ, ಮುದಸ್ಸಿರ್ ಕುದ್ರೋಳಿ, ಸಮರ್ಥ ಭಟ್, ಸ್ಟೀಫನ್ ಮರೋಳಿ, ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ್ ಉಳ್ಳಾಲ್ ಸ್ವಾಗತಿಸಿದರು. ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಬಿ. ಕಂಬಳಿ ವಂದಿಸಿದರು.