ಡಿವೈಎಫ್ಐ ಬಾಳೆಪುಣಿ – ಕೈರಂಗಳ ನೂತನ ಘಟಕ ಅಸ್ತಿತ್ವಕ್ಕೆ
ಮುಡಿಪು, ಆ. 10: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ನ ಬಾಳೆಪುಣಿ – ಕೈರಂಗಳ ಗ್ರಾಮದ ನೂತನ ಘಟಕಕ್ಕೆ ಮುಡಿಪು ಸಮೀಪದ ಹೂಹಾಕುವ ಕಲ್ಲಿನಲ್ಲಿರುವ ಎಸ್.ಕೆ ಹಾಲ್ ನಲ್ಲಿ ಚಾಲನೆ ನೀಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಿ.ವೈ.ಎಫ್.ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ ಭಾರತದ ಜಾತ್ಯಾತೀತ ಪರಂಪರೆಯನ್ನು ಉಳಿಸಿಕೊಳ್ಳಲು ಇಂದು ಡಿ.ವೈ.ಎಫ್.ಐ ನಂತಹ ಸಂಘಟನೆಗಳ ಅವಶ್ಯಕತೆ ಹೆಚ್ಚಿದ್ದು, ಎಲ್ಲಾ ಧರ್ಮದ, ಎಲ್ಲಾ ವರ್ಗದ ಯುವಜನರನ್ನು ಒಟ್ಟುಸೇರಿಸಿ ಡಿವೈಎಫ್ಐ ದೇಶಾದ್ಯಂತ ಕಲೆ, ಸಂಸ್ಕೃತಿಯ ರಕ್ಷಣೆಯ ಜೊತೆಗೆ ಸಾಮಾಜಿಕ ಪಿಡುಗುಗಳ ವಿರುದ್ಧ ಮತ್ತು ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಹೋರಾಡುತ್ತಿದೆ ಎಂದರು.
ದೇಶ ಕೋವಿಡ್ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಜನ ಒಪ್ಪೊತ್ತಿನ ಊಟಕ್ಕೆ ಕಷ್ಟ ಪಡುತ್ತಿದ್ದರೆ, ಸರ್ಕಾರ ಮಂದಿರ ಮಸೀದಿ ವಿಷಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟು ಜನರ ಗಮನ ಬೇರೆಡೆ ಸೆಳೆದು ಜನ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿದೆ. ಇದರ ವಿರುದ್ಧ ಧ್ವನಿ ಎತ್ತಬೇಕಿದ್ದ ವಿರೋಧ ಪಕ್ಷ ತಮ್ಮ ಅಸ್ತಿತ್ವಕ್ಕಾಗಿ ಹೆಣಗಾಡಬೇಕಾದ ಸ್ಥಿತಿ ನಿರ್ಮಾಣಮಾಡಲಾಗಿದೆ. ಹೀಗಾಗಿ ಯುವಜನರೇ ಹೋರಾಟಕ್ಕೆ ಧುಮುಕಬೇಕಿದ್ದು, ಇದಕ್ಕೆ ಡಿವೈಎಫ್ಐ ನೇತೃತ್ವ ನೀಡುತ್ತಿದೆ ಎಂದರು.
ಡಿವೈಎಫ್ಐ ಬಾಳೆಪುಣಿ – ಕೈರಂಗಳ ನೂತನ ಘಟಕದ ಅಧ್ಯಕ್ಷರಾಗಿ ಇಮ್ರಾನ್ ಅಲಿ ಕಾಯಾರ್, ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಖಲಂದರ್, ಕೋಶಾಧಿಕಾರಿಯಾಗಿ ನಝೀರ್ ತೋಟಾಲ್ ಆಯ್ಕೆಯಾದರು. ಸಭೆಯಲ್ಲಿ ಡಿ.ವೈ.ಎಫ್.ಐ ಉಳ್ಳಾಲ ವಲಯ ಸಮಿತಿ ಉಪಾಧ್ಯಕ್ಷ ರಝಾಕ್ ಮೊಂಟೆಪದವು, ಶರೀಫ್ ವಿದ್ಯಾನಗರ, ಡಿ.ವೈ.ಎಫ್.ಐ ಮುಡಿಪು ಘಟಕದ ಅಧ್ಯಕ್ಷ ರಝಾಕ್ ಮುಡಿಪು ಉಪಸ್ಥಿತರಿದ್ದರು.