ಮಂಗಳೂರಿನ ‘ಎಕ್ಕೂರು ಬಾಬಾ’ ನಿಧನ
ಮಂಗಳೂರು, ಆ.14: ಮಾಜಿ ರೌಡಿಶೀಟರ್ ಹಾಗೂ ಸಂಘಪರಿವಾರ ಹಿನ್ನೆಲೆಯ ‘ಎಕ್ಕೂರು ಬಾಬಾ’ ಎಂದೇ ಹೆಸರುವಾಸಿಯಾದ ಶುಭಕರ ಶೆಟ್ಟಿ (53) ನಗರದ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಸಂಜೆ ನಿಧನರಾದರು.
ಮಧುಮೇಹ ಸಹಿತ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ ಎಕ್ಕೂರು ಬಾಬಾ, ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೇ ನಿಧನರಾಗಿದ್ದಾರೆ.
ಹಿಂದೂ ಯುವಸೇನೆಯ ಮುಖಂಡರಾಗಿದ್ದ ಎಕ್ಕೂರು ಬಾಬಾ, ಪಕ್ಷವೊಂದರ ಸಹಿತ ಹಲವು ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು. ಪೃಥ್ವಿ ರೈ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಕ್ಕೂರು ಬಾಬಾ ಯಾನೆ ಶುಭಕರ ಶೆಟ್ಟಿ, ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ 2006ರಲ್ಲಿ ಖುಲಾಸೆಗೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆ ಬಳಿಕ ಶುಭಕರ ಶೆಟ್ಟಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದರು. ಅವರ ತಾಯಿ ಕೂಡ ವಾರದ ಹಿಂದೆಯಷ್ಟೇ ನಿಧನರಾಗಿದ್ದರು.
ಮೃತರು ಪತ್ನಿ, ಪುತ್ರ, ಮೂವರು ಸಹೋದರರು, ಸಹೋದರಿ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.