ಶೋಷಿತ ಸಮುದಾಯ ಒಂದಾದಾಗ ಮಾತ್ರ ನೈಜ ಸ್ವಾತಂತ್ರ್ಯ: ವಿಟಿ ರಾಜಶೇಖರ್
ಮಂಗಳೂರು, ಆ.15: ಶೋಷಿತ ಸಮುದಾಯಗಳು ಒಂದಾದಾಗ ಮತ್ತು ಅವರಿಗೆ ಸಿಗಬೇಕಾದ ನ್ಯಾಯವಾದ ಹಕ್ಕು ಸಿಕ್ಕಿದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಲಭಿಸಿದಂತೆ ಎಂದು ದಲಿತ್ ವಾಯ್ಸ್ ಸಂಪಾದಕ, ಖ್ಯಾತ ಸಾಮಾಜಿಕ ಕಾರ್ಯಕರ್ತ ವಿ.ಟಿ. ರಾಜಶೇಖರ್ ಹೇಳಿದರು.
‘ಸಾಮರಸ್ಯ, ಸಮಾನತೆ ಮತ್ತು ಸಹಬಾಳ್ವೆಗಾಗಿ ಸ್ವಾತಂತ್ರ್ಯ’ ಎಂಬ ಧ್ಯೇಯವಾಕ್ಯದೊಂದಿಗೆ ಯುನಿವೆಫ್ ಕರ್ನಾಟಕ ನಗರದ ಫಳ್ನೀರ್ನಲ್ಲಿರುವ ದಾರುಲ್ ಇಲ್ಮ್ ಮದ್ರಸ ವಠಾರದಲ್ಲಿ ನಡೆದ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣಗೈದು ಅವರು ಮಾತನಾಡಿದರು.
ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಆರ್ಥಿಕ, ಸಾಮಾಜಿಕ ಮತ್ತು ಸಾರ್ವಭೌಮತೆಯ ಅಭದ್ರತೆಯ ಹಾಗು ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿರುವಾಗ ಅವರ ಸಂಪೂರ್ಣ ಸಮಗ್ರ ಏಳಿಗೆಗಾಗಿ ಹೋರಾಟ ನಡೆಸುವುದು ಮತ್ತು ಗಳಿಸುವುದು ನಿಜವಾದಂತಹ ಸ್ವಾತಂತ್ರ್ಯ ಎಂದು ವಿಟಿ ರಾಜಶೇಖರ್ ಅಭಿಪ್ರಾಯಪಟ್ಟರು.
ನ್ಯಾಯವಾದಿ ಬಿಎ. ಮುಹಮ್ಮದ್ ಹನೀಫ್ ಮುಖ್ಯ ಅತಿಥಿಯಾಗಿದ್ದರು. ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯದರ್ಶಿ ಸೈಫುದ್ದೀನ್ ಸ್ವಾಗತಿಸಿದರು. ಅಬ್ದುಲ್ಲಾ ಪಾರೆ ವಂದಿಸಿದರು. ರಾಹಿಲ್ ಸಯೀದ್ ಕಿರಾಅತ್ ಪಠಿಸಿದರು.