ಕೊಡೇರಿ ಬಂದರಿನಲ್ಲಿ ನಾಡದೋಣಿ ದುರಂತ: ನಾಲ್ವರು ಮೀನುಗಾರರು ಸಮುದ್ರಪಾಲು; 8 ಮಂದಿಯ ರಕ್ಷಣೆ
ಬೈಂದೂರು, ಆ.16: ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡೇರಿ ಬಂದರಿನ ಅಳಿವೆಬಾಗಿಲುವಿನಲ್ಲಿ ಇಂದು ಮಧ್ಯಾಹ್ನ 3.30ರ ಸುಮಾರಿಗೆ ಸಂಭವಿಸಿದ ನಾಡದೋಣಿ ದುರಂತದಲ್ಲಿ ನಾಲ್ವರು ಮೀನುಗಾರರು ಸಮುದ್ರಪಾಲಾಗಿರುವ ಬಗ್ಗೆ ವರದಿಯಾಗಿದೆ.
ಉಪ್ಪುಂದ ಗ್ರಾಮದ ಕರ್ಕಿಕಳಿ ನಿವಾಸಿಗಳಾದ ಬಿ.ನಾಗ(46), ಲಕ್ಷ್ಮಣ್ ಖಾರ್ವಿ(34), ಮಂಜುನಾಥ್ ಖಾರ್ವಿ(38), ಕರ್ಕಿಕಳಿ ಫಿಶರೀಸ್ ಕಾಲೋನಿಯ ಶೇಖರ್ ಖಾರ್ವಿ(35) ನಾಪತ್ತೆಯಾಗಿರುವ ಮೀನುಗಾರರು.
ಉಳಿದಂತೆ ದೋಣಿಯಲ್ಲಿದ್ದ ಉಪ್ಪುಂದ ಜನತಾ ಕಾಲೋನಿಯ ನಿತ್ಯಾನಂದ (39), ಮಹಾಬಲ(40), ಕರ್ಕಿಕಳಿಯ ಸತೀಶ್(32), ಅಣ್ಣಪ್ಪ (39), ಜನಾರ್ದನ(35), ವೆಂಕಟರಮಣ(38), ಚಂದ್ರಶೇಖರ್(32), ಉಪ್ಪುಂದ ಫಿಶರೀಸ್ ಕಾಲೋನಿಯ ಚಂದ್ರ(45) ಎಂಬವರು ಪಾರಾಗಿದ್ದಾರೆ. ಇವರಲ್ಲಿ ಐವರು ಮೀನುಗಾರರು ತೀವ್ರವಾಗಿ ಅಸ್ವಸ್ಥಗೊಂಡು ಬೈಂದೂರು ಖಾಸಗಿ ಆ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಟ್ಟು 12 ಮಂದಿ ಮೀನುಗಾರರು ಬೆಳಗ್ಗೆ 10.30ರ ಸುಮಾರಿಗೆ ಸಾಗರಶ್ರೀ ಎಂಬ ನಾಡದೋಣಿಯಲ್ಲಿ ಕೊಡೇರಿ ಬಂದರಿನಿಂದ ಸಮುದ್ರಕ್ಕೆ ಮೀನು ಗಾರಿಕೆಗೆ ತೆರಳಿದ್ದರು. ಇವರೊಂದಿಗೆ ಇತರ ದೋಣಿಗಳು ಕೂಡ ಮೀನುಗಾರಿಕೆ ನಡೆಸುತ್ತಿತ್ತು. ಮೀನುಗಾರಿಕೆ ಮುಗಿಸಿ ವಾಪಾಸ್ಸು ಬರುತ್ತಿದ್ದ ವೇಳೆ ಅಳಿವೆ ಬಾಗಿಲಿನಲ್ಲಿ ಸಮುದ್ರದ ದೈತ್ಯ ಅಲೆಗಳ ಹೊಡೆತಕ್ಕೆ ಸಿಲುಕಿ ಸಾಗರಶ್ರೀ ದೋಣಿಯು ನೀರಿನ ಮಧ್ಯೆ ಮಗುಚಿ ಬಿತ್ತೆನ್ನಲಾಗಿದೆ.
ಇದರಿಂದ ಎಲ್ಲ ಮೀನುಗಾರರು ನೀರಿಗೆ ಬಿದ್ದರೆನ್ನಲಾಗಿದೆ. ಇದರಲ್ಲಿ ನಾಲ್ವರು ಮೀನಿನ ಬಲೆಯಲ್ಲಿ ಸಿಲುಕಿ ಸಮುದ್ರದಲ್ಲಿ ಮುಳುಗಿ ನಾಪತ್ತೆ ಯಾದರೆಂದು ತಿಳಿದುಬಂದಿದೆ. ಉಳಿದವರನ್ನು ಇತರ ದೋಣಿಯಲ್ಲಿದ್ದ ಮೀನುಗಾರರು ರಕ್ಷಿಸಿ ದಡ ಸೇರಿಸಿದ್ದಾರೆ. ನಾಪತ್ತೆಯಾದವರಿಗಾಗಿ ಗಂಗೊಳ್ಳಿ ಕರಾವಳಿ ಕಾವಲು ಪಡೆ ನೇತೃತ್ವದಲ್ಲಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಶೋಧ ಕಾರ್ಯ ತಡರಾತ್ರಿಯವರೆಗೂ ಮುಂದುವರೆದಿದೆ. ನಾಪತ್ತೆಯಾದವರು ಮೀನಿನ ಬಲೆಯೊಂದಿಗೆ ಸ್ಥಳದಲ್ಲಿಯೇ ಇರಬಹು ದೆಂಬ ಶಂಕೆಯಲ್ಲಿ ಕ್ರೇನ್ ಬಳಕೆ ಮಾಡಲಾಗಿದೆ. ಆದರೆ ತಡರಾತ್ರಿಯವರಗೆ ಯಾರು ಕೂಡ ಪತ್ತೆಯಾಗಿಲ್ಲ ಎಂದು ಕರಾವಳಿ ಕಾಲು ಪಡೆಯ ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಕುಂದಾಪುರ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಉಪ ವಿಭಾಗಾಧಿಕಾರಿ ರಾಜು, ಕರಾವಳಿ ಕವಾಲು ಪಡೆಯ ಗಂಗೊಳ್ಳಿ ನಿರೀಕ್ಷಕ ಸಂದೀಪ್, ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಡೇರಿ ಬಂದರಿನಲ್ಲಿ ನಡೆದ ದುರಂತದಲ್ಲಿ ಸಮುದ್ರ ಪಾಲಾಗಿರುವ ನಾಲ್ವರು ಮೀನುಗಾರರ ಶೋಧ ಕಾರ್ಯ ನಡೆಸಲಾಗುತ್ತಿದೆ. ಕರಾವಳಿ ಕಾವಲು ಪಡೆಯ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಾಪತ್ತೆಯಾದವರ ಬಗ್ಗೆ ಎಲ್ಲಿಯಾದರೂ ಮಾಹಿತಿ ಸಿಕ್ಕಿದರೆ ಸಾರ್ವಜನಿಕರು ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು.
-ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ