ಮಂಗಳೂರು: ವೇತನ ಪಾವತಿಗೆ ಒತ್ತಾಯಿಸಿ ಬಿಸಿಯೂಟ ನೌಕರರಿಂದ ಧರಣಿ
ಮಂಗಳೂರು, ಆ.17: ಬಿಸಿಯೂಟ ನೌಕರರಿಗೆ ಎಪ್ರಿಲ್ ತಿಂಗಳಿಂದ ಶಾಲೆ ಆರಂಭವಾಗುವವರೆಗೆ ವೇತನ ಪಾವತಿ ಹಾಗೂ ಇತರ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘದ ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸೋಮವಾರ ಧರಣಿ ನಡೆಯಿತು.
ಮಿನಿ ವಿಧಾನಸೌಧದ ಎದುರು ನಡೆದ ಧರಣಿಯಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ಬಿಸಿಯೂಟ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಕಳೆದ ನಾಲ್ಕು ತಿಂಗಳಿನಿಂದ ಆದಾಯವಿಲ್ಲದೆ ನಿಕೃಷ್ಟ ಸ್ಥಿತಿಗೆ ತಲುಪಿದ್ದಾರೆ. ಅವರ ಸ್ಥಿತಿಯನ್ನು ಸರಕಾರ ಅರ್ಥ ಮಾಡಿಕೊಂಡು ಅವರಿಗೆ ವೇತನ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ ಮಾತನಾಡಿ, ಕೊರೋನದಿಂದಾಗಿ ಅಕ್ಷರ ದಾಸೋಹ ನೌಕರರಿಗೆ ಕೆಲಸ ಹಾಗೂ ವೇತನವಿಲ್ಲವಾಗಿದೆ. ಲಾಕ್ಡೌನ್ ಹಾಗೂ ಬೇಸಿಗೆ ರಜೆಯ ಪರಿಹಾರವನ್ನು ನೀಡುವಂತೆ ವಿನಂತಿಸಿದರೂ ಲಕ್ಷಾಂತರ ಕಾರ್ಮಿಕರಿಗೆ ಪರಿಹಾರ ಒದಗಿಸಲಾಗಿಲ್ಲ. ಈ ಬಗ್ಗೆ ಸರಕಾರ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ವೇತನ ಪಾವತಿಸುವ ತನಕ ರಾಜ್ಯದ ಎಲ್ಲಾ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ಗಳ ಎದುರು ಸರಣಿ ಉಪವಾಸ ಸತ್ಯಾಗ್ರಹ ನಡೆಸಲು ಸಂಘಟನೆ ತೀರ್ಮಾನಿಸಿದೆ ಎಂದು ಅವರು ಈ ಸಂದರ್ಭ ಹೇಳಿದರು. ಬಿಸಿಯೂಟ ನೌಕರರಿಗೆ ಖಾಯಂ ಮಾಡಿ ಶಾಸನಾತ್ಮಕ ಸವಲತ್ತುಗಳನ್ನು ಒದಗಿಸಬೇಕು. ಬಿಸಿಯೂಟ ನೌಕರರಿಗೆ ಕನಿಷ್ಠ 6 ತಿಂಗಳವರೆಗೆ ಪಡಿತರ ಒದಗಿಸಬೇಕು. ಲಾಕ್ಡೌನ್ ಅವಧಿಯಲ್ಲಿ 7,500 ರೂ.ನಂತೆ ಮುಂದಿನ ಆರು ತಿಂಗಳು ಗೌರವಧನ ಪಾವತಿಸಬೇಕು. ಕೋವಿಡ್ ಭಾಗವಾಗಿ ಕ್ವಾರಂಟೈನ್ಲ್ಲಿದ್ದವರಿಗೆ ಅಡುಗೆ ಮಾಡುತ್ತಿದ್ದ ನೌಕರರಿಗೆ ವೇತನ ಪಾವತಿಸಬೇಕು ಎಂದೂ ಧರಣಿನಿರತರು ಆಗ್ರಹಿಸಿದರು.
ಧರಣಿಯಲ್ಲಿ ಸಂಘದ ಮುಖಂಡರಾದ ರೇಖಲತಾ, ಶಮೀನಾ ಬಾನು, ರತ್ನಮಾಲಾ, ರೆಮಿಝಾ, ಉಮಾವತಿ, ಅಂಜಲಿ, ಭವಾನಿ, ಪಾರ್ವತಿ, ಅನುರಾಧಾ ಅರುಣಾ ಮೊದಲಾದವರು ಭಾಗವಹಿಸಿದ್ದರು.