ಅತಿಕುರ್ರಹ್ಮಾನ್ ಮುನಿರಿ ಅನನ್ಯ ಸೇವೆ: ಇಸ್ಲಾಮಿಕ್ ವೆಲ್ಫೇರ್ ಸೊಸೈಟಿ, ವೆಲ್ಫೇರ್ ಹಾಸ್ಪಿಟಲ್ ವತಿಯಿಂದ ಸನ್ಮಾನ
ಭಟ್ಕಳ: ಯುಎಇ ಯ ಅನಿವಾಸಿ ಉದ್ಯಮಿ ಹಾಗೂ ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ಉಪಾಧ್ಯಕ್ಷ ಅತಿಕುರ್ರಹ್ಮಾನ್ ಮುನಿರಿಯವರ ವಿಶಿಷ್ಠ ಸಮಾಜ ಸೇವೆಯನ್ನು ಗುರುತಿಸಿ ಭಟ್ಕಳದ ಇಸ್ಲಾಮಿಕ್ ವೆಲ್ಫೇರ್ ಸೂಸೈಟಿ (ಬಡ್ಡಿರಹಿತ ಬ್ಯಾಂಕ್) ಹಾಗೂ ವೆಲ್ಪೇರ್ ಆಸ್ಪತ್ರೆಯ ಆಡಳಿತ ಮಂಡಳಿ ವತಿಯಿಂದ ಸೋಮವಾರ ಸನ್ಮಾನಿಸಿ ಗೌರವಿಸುವದರೊಂದಿಗೆ ಕೃತಜ್ಞತಾರ್ಪಣ ಪತ್ರವನ್ನು ಅರ್ಪಿಸಲಾಯಿತು.
ಕೊರೋನ ಭೀತಿಯಿಂದ ಇಡಿ ಜಗತ್ತೇ ತಲ್ಲಣಗೊಂಡಿದ್ದು ದುಬೈ ಮತ್ತಿತರ ಗಲ್ಫ್ ರಾಷ್ಟ್ರಗಳಲ್ಲಿ ಕಷ್ಟಕ್ಕೆ ಸಿಲುಕಿಕೊಂಡಿದ್ದ ಭಟ್ಕಳ ಮತ್ತು ಭಟ್ಕಳದ ಆಸುಪಾಸಿನ ಸುಮಾರು 400ಕ್ಕೂ ಹೆಚ್ಚು ಜನರನ್ನು ಬಾಡಿಗೆ ವಿಮಾನದ ಮೂಲಕ ಭಟ್ಕಳಕ್ಕೆ ಕರೆ ತರುವ ವ್ಯವಸ್ಥೆ ಮಾಡಿದ್ದಲ್ಲದೆ ಭಟ್ಕಳದಲ್ಲಿ ತಂಝೀಮ್ ಸಂಸ್ಥೆಯ ಸಹಯೋಗದೊಂದಿಗೆ ಕೊರೋನ ಸೋಂಕಿತರನ್ನು ಚಿಕಿತ್ಸೆ ಮಾಡುವುದು, ಕ್ವಾರೆಂಟೈನ್ ಮಾಡುವುದು ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿ ತಮ್ಮ ಸಮಾಜಿಕ ಕಳಕಳಿಯನ್ನು ಮೆರೆದಿದ್ದರು.
ಇವರ ಸಾಮಾಜಿಕ ಸೇವೆ ಮತ್ತು ಮಾನವೀಯ ಕಳಕಳಿಯು ಇವರ ಪಿತ ದಿ. ಅಬ್ದುಲ್ ಮತೀನ್ ಮುನೀರಿಯವರಿಂದ ಬಳುವಳಿಕೆಯಾಗಿ ಪಡೆದುಕೊಂಡಿದ್ದು ತಮ್ಮ ತಂದೆಯ ಹಾದಿಯಲ್ಲಿ ಮುನ್ನೆಡೆಯುತ್ತಿದ್ದಾರೆ. ಭಟ್ಕಳದಲ್ಲಿ ಬಡ ಜನರಿಗೆ ಅಂಬ್ಯುಲನ್ಸ್ ಸೇವೆಯನ್ನು ಕೂಡ ಅವರು ಇತ್ತೀಚೆಗೆ ಆರಂಭಿಸಿದ್ದು ಇವರ ಮನುಷ್ಯ ಪ್ರೇಮವನ್ನು ತೋರಿಸುತ್ತದೆ ಎಂದು ಇಸ್ಲಾಮಿಕ್ ವೆಲ್ಫೇರ್ ಸೂಸೈಟಿಯ ಮೌಲಾನ ಸೈಯ್ಯದ್ ಝುಬೈರ್ ಎಸ್.ಎಂ. ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನನಗೆ ಇದಕ್ಕೆಲ್ಲ ಪ್ರೇರಣೆ ತಮ್ಮ ತಂದೆಯವರಿಂದ ದೊರಕಿದೆ. ಭಗವಂತನ ಸಹಾಯದಿಂದಲ್ಲದೆ ನಾನೇನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಸೃಷ್ಟಿಕರ್ತನ ಅನುಗ್ರಹ ಮತ್ತು ಕರುಣೆಯೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದರು.
ಈ ಸಂದರ್ಭ ತಂಝೀಮ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ, ವೆಲ್ಫೇರ್ ಆಸ್ಪತ್ರೆಯ ಸಿ.ಇ.ಓ ಸೈಯ್ಯದ್ ಗುಫ್ರಾನ್ ಲಂಕಾ, ಸೈಯ್ಯದ್ ಸಲಾಹುದ್ದೀನ್ ಎಸ್.ಕೆ, ಹಾಷಿಮ್ ಕೋಲಾ, ಅಬ್ದುಲ್ ಬದಿ ಮುನಿರಿ, ಫವ್ವಾಝ್ ಸುಕ್ರಿ ಮುಂತಾದವರು ಉಪಸ್ಥಿತರಿದ್ದರು.