ಮಂಗಳೂರಿನ ‘ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ’ದಿಂದ ಬೆಂಗಳೂರಿನಲ್ಲಿ ಪ್ಲಾಸ್ಮಾ ದಾನ
ಮಂಗಳೂರು, ಆ.17: ಕೊರೋನ ಸೋಂಕು ಪಾಸಿಟಿವ್ಗೊಳಗಾದವರಿಗೆ ‘ಪ್ಲಾಸ್ಮಾ’ ದಾನ ಮಾಡುವ ಬಗ್ಗೆ ಸಮಾಜದಲ್ಲಿ ಇತ್ತೀಚೆಗೆ ಜಾಗೃತಿ ಮೂಡುತ್ತಿರುವುದಕ್ಕೆ ಮಂಗಳೂರಿನ ‘ಬ್ಲಡ್ಹೆಲ್ಪ್ ಕೇರ್ ಕರ್ನಾಟಕ’ ಸಾಕ್ಷಿಯಾಗಿದೆ.
ಈ ಸಂಸ್ಥೆಯ ವ್ಯವಸ್ಥಾಪಕ ನವಾಝ್ ಮೇಲಂಗಡಿ, ಸದಸ್ಯರಾದ ಶಾಹಿದ್ ಉಳ್ಳಾಲ, ಮುಸವ್ವಿರ್ ಉಳ್ಳಾಲ ಅವರು ಪ್ಲಾಸ್ಮಾ ದಾನ ಮಾಡುವ ಸಲುವಾಗಿಯೇ ರವಿವಾರ ಬೆಂಗಳೂರಿಗೆ ತೆರಳಿದ್ದು, ಸೋಮವಾರ ಸಂಜೆ ಪ್ಲಾಸ್ಮಾ ದಾನ ಮಾಡಿದ್ದಾರೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರಿಗೆ ತುರ್ತಾಗಿ ‘ಪ್ಲಾಸ್ಮಾ’ಅ ಅಗತ್ಯವಿತ್ತು. ಈ ಬಗ್ಗೆ ಮಾಹಿತಿ ಪಡೆದ ವೆಲ್ನೆಸ್ ಹೆಲ್ಪ್ಲೈನ್ನ ಮುಖಂಡರು ‘ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ’ದ ಮುಖಂಡರ ಗಮನ ಸೆಳೆದರು. ಈ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕದ ವ್ಯವಸ್ಥಾಪಕ ನವಾಝ್ ಮೇಲಂಗಡಿ ಕೊರೋನ-ಲಾಕ್ಡೌನ್ ಸಂದರ್ಭ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ್ದರು. ಉಳ್ಳಾಲದಲ್ಲಿ ರ್ಯಾಂಡಮ್ ಪರೀಕ್ಷೆ ನಡೆಸಿದಾಗ ಅವರಿಗೂ ಕೊರೋನ ಪಾಸಿಟಿವ್ ಆಗಿರುವ ಬಗ್ಗೆ ವರದಿಯಾಗಿತ್ತು. ಹಾಗಾಗಿ ಚಿಕಿತ್ಸೆ ಪಡೆದು ಗುಣಮುಖರಾದ ನವಾಝ್ ಮೇಲಂಗಡಿ ಪ್ಲಾಸ್ಮಾ ದಾನ ಮಾಡುವ ಬಗ್ಗೆ ಇಚ್ಛೆ ವ್ಯಕ್ತಪಡಿಸಿದ್ದರು. ಅವರ ಜೊತೆ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕದ ಸದಸ್ಯರಾದ ಶಾಹಿದ್ ಉಳ್ಳಾಲ ಮತ್ತು ಮುಸವ್ವಿರ್ ಉಳ್ಳಾಲ ಕೂಡ ಸಾಥ್ ನೀಡುವುದಾಗಿ ತಿಳಿಸಿದರು.
ಈ ಮಧ್ಯೆ ಕೊರೋನ ಪಾಸಿಟಿವ್ಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಿಂದ ತುರ್ತಾಗಿ ‘ಪ್ಲಾಸ್ಮಾ’ ವ್ಯವಸ್ಥೆ ಕಲ್ಪಿಸಿದ ‘ಬ್ಲಡ್ಹೆಲ್ಪ್ ಕೇರ್ ಕರ್ನಾಟಕ’ ಮತ್ತು ‘ವೆಲ್ನೆಸ್ ಹೆಲ್ಪ್ಲೈನ್’ನ ಮುಖಂಡರು ‘ಪ್ಲಾಸ್ಮಾ’ ಬದಲಿ ವ್ಯವಸ್ಥೆ ಮಾಡುವ ಬಗ್ಗೆ ಅಶ್ವಾಸನೆ ನೀಡಿದ್ದರು. ಅದರಂತೆ ರವಿವಾರ ಸಂಜೆ ಮಂಗಳೂರಿನಿಂದ ಬೆಂಗಳೂರಿಗೆ ಹೊರಟ ಮೂವರು ಸೋಮವಾರ ಸಂಜೆ ಪ್ಲಾಸ್ಮಾ ದಾನ ಮಾಡಿದ್ದಾರೆ.
ಈ ಬಗ್ಗೆ ‘ವಾರ್ತಾಭಾರತಿ’ಯ ಜೊತೆ ಮಾತನಾಡಿದ ನವಾಝ್ ಮೇಲಂಗಡಿ ‘ಲಾಕ್ಡೌನ್ ಸಂದರ್ಭ ನಾನು ಕೊರೋನ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ್ದೆ. ಈ ಸಂದರ್ಭ ನನಗೂ ಪಾಸಿಟಿವ್ ಬಂದಿತ್ತು. ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಮತ್ತೆ ಸ್ವಯಂ ಸೇವಕನಾದೆ. ಮೊನ್ನೆ ತುರ್ತು ಪ್ಲಾಸ್ಮಾ ಅಗತ್ಯವಿದೆ ಎಂದಾಗ ಅದರ ವ್ಯವಸ್ಥೆ ಮಾಡಿದೆವು. ಅದಕ್ಕೆ ಪ್ರತಿಯಾಗಿ ನಾವಿಂದು ಮೂವರು ಪ್ಲಾಸ್ಮಾ ದಾನ ಮಾಡಿದೆವು. ರಕ್ತದಾನ ಮಾಡಿದಾಗ ಸಿಗುವಷ್ಟೇ ನೆಮ್ಮದಿ ಇದರಿಂದಲೂ ಸಿಗುತ್ತಿದೆ. ನಾವು ಪ್ಲಾಸ್ಮಾ ದಾನ ಮಾಡುವ ಬಗ್ಗೆ ಮಾಹಿತಿ ಪಡೆದ ಶಾಸಕ ಯುಟಿ ಖಾದರ್ ನಮಗೆ ಬೆಂಗಳೂರಿನಲ್ಲಿ ಉಚಿತ ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ. ಅವರಿಗೂ ನಾವು ಅಭಾರಿಯಾಗಿದ್ದೇವೆ. ಯಾರಿಗಾದರು ಪ್ಲಾಸ್ಮಾದ ಅಗತ್ಯವಿದ್ದರೆ ತನ್ನನ್ನು (ಮೊ.9986656589)ಸಂಪರ್ಕಿಸಬಹುದು’ ಎಂದು ಮನವಿ ಮಾಡಿದ್ದಾರೆ.
ನಮ್ಮ ಸಂಸ್ಥೆಯು ಕಳೆದ ಎರಡು ವರ್ಷದಿಂದ ಸಮಾಜಮುಖಿ ಸೇವೆಯಲ್ಲಿ ನಿರತವಾಗಿದೆ. ಅದರಲ್ಲೂ ತುರ್ತು ರಕ್ತ ಪೂರೈಕೆಗೆ ಆದ್ಯತೆ ನೀಡು ತ್ತಿದೆ. ಈವರೆಗೆ 62 ಶಿಬಿರ ಆಯೋಜಿಸಿ ದ್ದೇವೆ. ಮಹಿಳೆಯೊಬ್ಬರಿಗೆ ಪ್ಲಾಸ್ಮಾದ ಅಗತ್ಯವಿರುವ ಬಗ್ಗೆ ಮಾಹಿತಿ ಪಡೆದ ನಾವು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದೆವು. ರಕ್ತದಾನದಂತೆ ಪ್ಲಾಸ್ಮಾ ದಾನದ ಬಗ್ಗೆಯೂ ಸಮಾಜದಲ್ಲಿ ಜಾಗೃತಿ ಮೂಡಿಸಲಿದ್ದೇವೆ ಎಂದು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕದ ಗೌರವಾಧ್ಯಕ್ಷ ಇಫ್ತಿಕಾರ್ ಅಹ್ಮದ್ ಕೃಷ್ಣಾಪುರ ತಿಳಿಸಿದ್ದಾರೆ.