ಆ. 20ರಂದು ಡಿಜಿಟಲ್ ವ್ಯವಸ್ಥೆಯಡಿ ಕೊಂಕಣಿ ಮಾನ್ಯತಾ ದಿನಾಚರಣೆ
ಮಂಗಳೂರು, ಆ.18: ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಕೊಂಕಣಿ ಮಾನ್ಯತಾ ದಿನವನ್ನು ಡಿಜಿಟಲ್ ವ್ಯವಸ್ಥೆಯಡಿ ಆ. 20ರಂದು ಆಚರಿಸಲಾಗುವುದು ಎಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಕೆ. ಜಗದೀಶ್ ಪೈ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಕರಾವಳಿ ಜಿಲ್ಲೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ವಿವಿಧ ಪಂಗಡಗಳಿಗೆ ಸೇರಿದ ಸಮಸ್ತ ಕೊಂಕಣಿ ಮಾತೃ ಭಾಷಿಕರಿಗೆ ಈ ದಿನದ ಕಾರ್ಯಕ್ರಮವನ್ನು ವೀಕ್ಷಿಸಲು ಅನುಕೂಲವಾಗುವಂತೆ ನಮ್ಮ ಕುಡ್ಲ ಪ್ರಾದೇಶಿಕ ಚಾನೆಲ್ನಲ್ಲಿ ನೇರ ಪ್ರಸಾರ ಮಾಡಲಾಗುದು ಎಂದರು.
ಅಶೋಕನಗರದ ದೈವಜ್ಞ ಕಲ್ಯಾಣ ಮಂಟದಲ್ಲಿ ಸಂಜೆ 6 ಗಂಟೆಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ಮೇಯರ್ ದಿವಾಕರ ಪಾಂಡೇಶ್ವರ, ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಅಕಾಡೆಮಿ ಸದಸ್ಯರ ಉಪಸ್ಥಿತಿ ಯಲ್ಲಿ ಕಾರ್ಯಕ್ರಮ ಸರಳವಾಗಿ ನಡೆಯಲಿದೆ.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಹಾಗೂ ಶಾಂತರಾಮ ಸಿದ್ಧಿ ಅವರಿಗೆ ಗೌರವ ಸನ್ಮಾನ ಮಾಡಲಾಗು ವುದು. ಸಭೆಯ ಬಳಿಕ ಕೊಂಕಣಿ ಸಾಂಸ್ಕೃತಿಕ ಸಂಘದಿಂದ ಸಮೂಹ ಗಾನ, ಡೋಲ್ವಿನ್ ಕೊಳಲಗಿರಿ ಮತ್ತು ತಂಡದಿಂದ ವೈವಿಧ್ಯಮಯ ಕಾರ್ಯಕ್ರಮ ಹಾಗೂ ಕಿರಣ್ ಪೈ ತಂಡದಿಂದ ಕೊಂಕಣಿ ಮಹಿಳಾ ಯಕ್ಷಗಾನ, ಕಾರ್ಕಳದ ಪಲ್ಲವಿ ತಂಡದಿಂದ ಕೊಂಕಣಿ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಸದಸ್ಯರಾದ ಗೋಪಾಲಕೃಷ್ಣ ಭಟ್, ಅರುಣ್ ಜಿ. ಶೇಟ್, ಪೂರ್ಣಿಮಾ ಸುರೇಶ್, ನವೀನ್ ನಾಯಕ್ ಉಪಸ್ಥಿತರಿದ್ದರು.
ಅಕಾಡೆಮಿಗೆ ಸಹ ಸದಸ್ಯರ ನೇಮಕ
ಸರಕಾರದ ನಿಯಮಗಳಿಗನುಸಾರವಾಗಿ ಕನ್ನಡ ಸಂಸ್ಕೃತಿ ಸಚಿವರ ಪೂರ್ವಾನುಮತಿಯೊಂದಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಮಂಗಳೂರಿನ ಕೆನೂಟ್ ಜೀವನ್ ಪಿಂಟೋ ಹಾಗೂ ಸಾಣೂರಿನ ನರಸಿಂಹ ಕಾಮತ್ರನು ಸಹ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಅಕಾಡಮಿ ಅಧ್ಯಕ್ಷ ಡಾ. ಕೆ. ಜಗದೀಶ್ ಪೈ ತಿಳಿಸಿದರು.