ಮಂಗಳೂರು ತಾಪಂ ಸಭೆ: ಗೋಮಾಳ ಜಾಗ ಒತ್ತುವರಿ ವಿರುದ್ಧ ಕ್ರಮಕ್ಕೆ ಸದಸ್ಯರ ಆಗ್ರಹ
ಮಂಗಳೂರು, ಆ.18: ಮಂಗಳೂರು ತಾಲೂಕಿನಲ್ಲಿ ಗೋಮಾಳ ಜಾಗ ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಕೈಗೊಂಡು ಒತ್ತುವರಿ ತೆರವು ಮಾಡುವಂತೆ ಮಂಗಳೂರು ತಾಪಂ ಸಭೆಯಲ್ಲಿ ಆಗ್ರಹಿಸಲಾಗಿದೆ.
ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಈ ಬಗ್ಗೆ ಒತ್ತಾಯ ಮಾಡಿದರು. ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಇದಕ್ಕೆ ಉತ್ತರಿಸಿ, ಗೋಮಾಳ ಜಾಗಗಳನ್ನು ಭೂದಾಖಲೆಗಳೊಂದಿಗೆ ಗುರುತಿಸಿ ಸರ್ವೇ ಮಾಡಲಾಗುವುದು. ಒತ್ತುವರಿ ಮಾಡಿಕೊಂಡವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಂಗಳೂರು ತಾಲೂಕಿನಿಂದ ವಿಭಜನೆಗೊಂಡು ನೂತನವಾಗಿ ರಚನೆವಾಗಿರುವ ಮೂಡುಬಿದಿರೆ ತಾಲೂಕಿಗೆ ರಾಜ್ಯ ಸರಕಾರದಿಂದ 10 ಕೋ.ರೂ. ಅನುದಾನ ಬಿಡುಗಡೆಯಾಗಿದೆ. ಮಂಗಳೂರು ತಾಪಂನಿಂದ 8 ಸದಸ್ಯರು ಹೊಸದಾಗಿ ರಚನೆಗೊಂಡಿರುವ ಮೂಡುಬಿದಿರೆ ತಾಲೂಕಿಗೆ ಸೇರ್ಪಡೆಯಾಗಿದ್ದಾರೆ ಎಂದು ಮುಹಮ್ಮದ್ ಮೋನು ತಿಳಿಸಿದರು.
ತಹಶೀಲ್ದಾರ್ ಮಾತನಾಡಿ ಗುರುಪುರದಲ್ಲಿ ಈ ಹಿಂದೆ ಗುಡ್ಡ ಕುಸಿತದಿಂದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇಂತಹ ಈ ಘಟಣೆಯು ತಾಲೂಕು ವ್ಯಾಪ್ತಿಯಲ್ಲಿ ಮತ್ತೊಂದು ಬಾರಿ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಗುಡ್ಡ ಕುಸಿತದ ಸ್ಥಳದಲ್ಲಿ 73 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದ್ದು, ಅವರಿಗೆ ಪತ್ರಿ ತಿಂಗಳು 2,500 ರೂ. ವನ್ನು ಬಾಡಿಗೆಗಾಗಿ ನೀಡಲಾಗುತ್ತಿದೆ. ತಾಲೂಕಿನ 3 ಕಡೆಯಲ್ಲಿ 69 ಮನೆ ಗಳನ್ನು ಅಪಾರ್ಟ್ಮೆಂಟ್ ರೂಪದಲ್ಲಿ ನಿರ್ಮಾಣ ಮಾಡಿಕೊಡಲಾಗುವುದು. ತಾಲೂಕು ವ್ಯಾಪ್ತಿಯಲ್ಲಿ ಎನ್ಐಟಿಕೆ ತಂಡವು ನಡೆಸಿದ ಸರ್ವೇ ಯಲ್ಲಿ ಸುಮರು 260 ಮನೆಗಳು ಅಪಾಯದ ಪ್ರದೇಶದಲ್ಲಿದ್ದು, ಅವುಗಳನ್ನು ಅದಷ್ಟು ಬೇಗನೆ ಸ್ಥಳಾಂತರ ಮಾಡುವುವಂತೆ ಸೂಚಿಸಲಾಗಿದೆ ಎಂದರು.
ಗಂಜಿಮಠ-ಕುಪ್ಪೆಪದವು ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸೇತುವೆ ನಿರ್ಮಾಣ ಹಾಗೂ ರಸ್ತೆ ಅಗಲೀಕರಣ ಕೆಲವು ಪ್ರಗತಿಯಲ್ಲಿದ್ದು, ಆದಷ್ಟು ಬೇಗನೇ ಪೂರ್ಣಗೊಳ್ಳಲಿದೆ. ರಾಜೀವ ಗಾಂಧಿ ವಸತಿ ನಿಗಮದ ಮಾರ್ಗಸೂಚಿಯಂತೆ ಸಂಬಂಧಪಟ್ಟ ಗ್ರಾಪಂ ವ್ಯಾಪ್ತಿಯಲ್ಲಿರುವ ನಿವೇಶನವನ್ನು ಅದೇ ಗ್ರಾಮದ ಅರ್ಹ ಫಲಾನುಭವಿಗಳಿಗೆ ಮಾತ್ರ ಹಂಚಿಕೆ ಮಾಡಲಾಗುತ್ತದೆ. ಬೇರೆ ಗ್ರಾಪಂ ಫಲಾನುಭವಿಗಳಿಗೆ ಹಂಚಿಕೆ ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಪಿಂಚಣಿ ಫಲಾನುಭವಿಗಳಿಗೆ ವೇತನವನ್ನು ಆನ್ಲೈನ್ ಮೂಲಕ ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುವುದು. ಫಲಾನುಭವಿಗಳಿಗೆ ತಮ್ಮ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಕಚೇರಿಗೆ ಬರುವ ಅಗತ್ಯವಿಲ್ಲ. ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್ಗಳನ್ನು ವಾಟ್ಸ್ಆ್ಯಪ್ ಮುಖಾಂತರ ಕಳುಹಿಸಿ ಕೊಟ್ಟರೆ ಇಲಾಖೆಯಿಂದ ಲಿಂಕ್ ಮಾಡಿಕೊಡಲಾಗುವುದು. ಕೆಲವೊಂದು ಗ್ರಾಪಂಗಳ ಮಧ್ಯೆ ತಕರಾರು ಅರ್ಜಿಗಳು ಇವೆ. ಅವುಗಳನ್ನು ಅದಷ್ಟು ಬೇಗನೆ ಸರ್ವೇ ನಡೆಸಿ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಮಂಗಳೂರು ತಾಪಂ ಉಪಾಧ್ಯಕ್ಷೆ ಪೂರ್ಣಿಮಾ, ತಾಪಂ ಇಒ ಸದಾನಂದ,ತಾಪಂ ಸದಸ್ಯರು, ಆಯ್ದ ಗ್ರಾಪಂ ಅಧ್ಯಕ್ಷರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದರು.