ಐದು ಅಪರಿಚಿತ ಮೃತದೇಹಗಳ ಅಂತ್ಯಸಂಸ್ಕಾರ
ಉಡುಪಿ, ಆ.18: ವಾರಸುದಾರರು ಪತ್ತೆಯಾಗದ ಹಿನ್ನೆಲೆ ಯಲ್ಲಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಐದು ಅಪರಿಚಿತ ಮೃತದೇಹಗಳ ಅಂತ್ಯಸಂಸ್ಕಾರವನ್ನು ಪೊಲೀಸರು ಸಮಾಜಸೇವಕರ ಸಹಕಾರ ದಿಂದ ಸೋಮವಾರ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ನೆರವೇರಿಸಿದರು.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ಮೂವರು ರೋಗಿಗಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಉಡುಪಿ ನಗರದ ಸಾರ್ವಜನಿಕ ಸ್ಥಳದಲ್ಲಿ 75 ವರ್ಷದ ವೃದ್ಧರೊರ್ವರ ಶವ ಪತ್ತೆಯಾಗಿತ್ತು. ಹಾಗೆಯೇ ಮಲ್ಪೆಯ ತೊಟ್ಟಂ ಸಮುದ್ರ ಕಿನಾರೆಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿತ್ತು. ಈ ಐದು ಶವಗಳ ವಾರಸುದಾರರ ಕಾಯುವಿಕೆಯ ಕಾಲಮಿತಿ ಕಳೆದರೂ, ಸಂಬಂಧಪಟ್ಟವರು ಸಂಪರ್ಕಿಸದೆ ಇರುವುದರಿಂದ, ಕಾನೂನಿನಂತೆ ಅಂತ್ಯ ಸಂಸ್ಕಾರ ನಡೆಸಲಾಗಿದೆ.
ಕಾನೂನು ಪ್ರಕ್ರಿಯೆಗಳು ನಡೆಸಿದ ಬಳಿಕ, ಉಡುಪಿ ನಗರ ಠಾಣೆಯ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು, ಮಲ್ಪೆ ಠಾಣೆಯ ಸಿಬ್ಬಂದಿ ಜಯಕರ್ ಪಾಲನ್, ಎಸ್.ಎಂ.ಕಲಾದಗಿ ಸಮಕ್ಷಮದಲ್ಲಿ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅಂತಿಮ ಗೌರವಗಳ ಸಲ್ಲಿಸಿ ಅಂತ್ಯಸಂಸ್ಕಾರವನ್ನು ನಡೆಸಿದರು. ಅಂಬುಲೆನ್ಸ್ ಚಾಲಕ ರಾದ ಮಂದಾರ, ಶರತ್, ಸುಶೀಲಾ ರಾವ್ ಸಹಕರಿಸಿದರು.