ಬಿಬಿಎಂಪಿ ಕೌನ್ಸಿಲ್ ಸಭೆ: ಹೊಸದಾಗಿ ಕಸಗುಡಿಸುವ ಯಂತ್ರ ಖರೀದಿಗೆ ವಿರೋಧ

ಬೆಂಗಳೂರು, ಆ.18: ಅಲ್ಪಾವಧಿಯಲ್ಲಿ 252 ಕೋಟಿ ರೂ. ವೆಚ್ಚದಲ್ಲಿ ಕಸ ಗುಡಿಸುವ ಯಂತ್ರಗಳನ್ನು ಖರೀದಿಸಲು ಅಧಿಕಾರ ಮಟ್ಟದಲ್ಲೇ ಟೆಂಡರ್ ಪ್ರಕ್ರಿಯೆ ನಡೆಸುವ ಬಗ್ಗೆ ಬಿಬಿಎಂಪಿ ಸದಸ್ಯರು ಪಕ್ಷ ಬೇಧವಿಲ್ಲದೆ ವಿರೋಧ ವ್ಯಕ್ತಪಡಿಸಿದರು.
ಮಂಗಳವಾರ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಅವರು, ನಗರದಲ್ಲಿ ಹೊಸದಾಗಿ 25 ಕಸಗುಡಿಸುವ ಯಂತ್ರಗಳನ್ನು ಖರೀದಿ ಮಾಡುವುದಕ್ಕೆ 227 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿದೆ. ಕೊರೋನ ತುರ್ತು ಸಂದರ್ಭದಲ್ಲಿ ಇದರ ಅವಶ್ಯಕತೆ ಏನಿದೆ ಎಂದು ಪ್ರಶ್ನೆ ಮಾಡಿದರು.
ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕಸಗುಡಿಸುವ ಯಂತ್ರಗಳೇ ಬಳಕೆಯಾಗುತ್ತಿಲ್ಲ. ಇದೀಗ ಹೊಸದಾಗಿ 25 ಯಂತ್ರಗಳಿಗೆ 40 ಕೋಟಿ ರೂ. ಮತ್ತು ಇದರ ನಿರ್ವಹಣೆಗೆ ಏಳು ವರ್ಷಗಳಿಗೆ 186 ಕೋಟಿ ರೂ. ನಿಗದಿ ಮಾಡಿ ಟೆಂಡರ್ ಕರೆಯಲಾಗಿದೆ ಇದನ್ನು ಪಾಲಿಕೆಯ ಗಮನಕ್ಕೆ ತರದೆ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಗಳು ಕರೆದಿದ್ದಾರೆ ಎಂದು ಆರೋಪಿಸಿದರು.
ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ಜಿ.ಮಂಜುನಾಥ್ ರಾಜು ಮಾತನಾಡಿ, ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ ಐದು ಕ್ಯೂಬಿಕ್ ಸಾಮಥ್ರ್ಯದ ಕಸಗುಡಿಸುವ ಯಂತ್ರ ಕೆಲಸ ಮಾಡುತ್ತಿಲ್ಲ. ಅದರಲ್ಲಿ ಇದೀಗ 10 ಕ್ಯೂಬಿಕ್ ಸಾಮರ್ಥ್ಯದ ವಾಹನ ಖರೀದಿ ಬೇಡ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅಗತ್ಯವಿದ್ದರೆ ಉತ್ತಮವಾದ ವಾಹನ ಖರೀದಿ ಮಾಡಿಕೊಳ್ಳೋಣ ಸುಮ್ಮನೆ ಬಿಬಿಎಂಪಿಯ ಹಣ ವೆಚ್ಚ ಮಾಡುವುದು ಬೇಡ ಎಂದರು.
ಮೇಯರ್ ಎಂ.ಗೌತಮ್ಕುಮಾರ್ ಅವರು ಮಾತನಾಡಿ, ಎಲ್ಲ ಕಸಗುಡಿಸುವ ಯಂತ್ರಗಳನ್ನು ಪಾಲಿಕೆಯ ಆವರಣದಲ್ಲಿ ಒಮ್ಮೆ ತಂದು ತೋರಿಸಿ ಇದನ್ನು ಪರಿವೀಕ್ಷಣೆ ಮಾಡಬೇಕು ಎಂದು ಕೋರಿದರೂ ಈ ವಾಹನಗಳನ್ನು ತಂದು ನಿಲ್ಲಿಸಿಲ್ಲ ಈ ಬಗ್ಗೆ ನನಗೂ ಅನುಮಾನವಿದೆ ಎಂದರು.
ಮಾಜಿ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಮಾತಮಾಡಿ, ಕಸಗುಡಿಸುವ ಯಂತ್ರ ಪ್ರತಿ ಗಂಟೆಗೆ 40 ಕಿ.ಮೀ ಕಸಗುಡಿಸುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಕಸಗುಡಿಸುವ ಯಂತ್ರ ಪ್ರತಿ ಗಂಟೆಗೆ 20 ಕಿ.ಮೀ ಕಸಗುಡಿಸುತ್ತದೆ ಎಂದು ಪಾಲಿಕೆಯ ಯಾವುದೇ ಅಧಿಕಾರಿಯಾದರು ಸಾಬೀತು ಮಾಡಿದರೆ ನಾನು ಅವರಿಗೆ ಒಂದು ಲಕ್ಷ ರೂ. ನೀಡುತ್ತೇನೆ ಎಂದು ಸವಾಲು ಹಾಕಿದರು.
ಕಸಗುಡಿಸುವ ಯಂತ್ರ ಖರೀದಿ ವಿಚಾರಕ್ಕೆ ಉತ್ತರ ನೀಡಿದ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು, ಪಾಲಿಕೆ ಸದಸ್ಯರ ಅಭಿಪ್ರಾಯದಂತೆ ಈಗ ಕರೆದಿರುವ ಕಸಗುಡಿಸುವ ಟೆಂಡರ್ ರದ್ದು ಮಾಡಿ, ಅಗತ್ಯವಿದ್ದರೆ ಕಸಗುಡಿಸುವ ಯಂತ್ರ ಖರೀದಿಗೆ ಹೊಸದಾಗಿ ಟೆಂಡರ್ ಕರೆಯುವುದಕ್ಕೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಡಿಜೆ ಹಳ್ಳಿ ಸಂತ್ರಸ್ತರಿಗೆ ಪರಿಹಾರ ನೀಡಲು ಮನವಿ
ನಗರದ ಕಾವಲ್ಭೈರಸಂದ್ರ, ಡಿ.ಜೆ ಹಳ್ಳಿ ವಾರ್ಡ್ನಲ್ಲಿ ನಡೆದ ಗಲಭೆ ಕುರಿತು ಪ್ರಸ್ತಾಪಿಸಿದ ಕಾವಲ್ಭೈರಸಂದ್ರ ವಾರ್ಡ್ನ ಕಾಪೆÇೀರೇಟರ್ ನೇತ್ರಾ ನಾರಾಯಣ್ ಅವರು, ಕಳೆದವಾರ ನಮ್ಮ ವಾರ್ಡ್ನಲ್ಲಿ ನೆಲೆಸಿರುವ ಶಾಸಕರೊಬ್ಬರ ಮನೆಗೆ ಗಲಭೆಕೋರರು ಬೆಂಕಿ ಹಚ್ಚಿದ್ದಾರೆ. ಈ ವೇಳೆ ಸುತ್ತಲಿನ ಮನೆಗಳ ಬಾಗಿಲು, ಕಿಟಕಿ ಕಾಂಪೌಂಡ್ ಒಡೆದು ಹಾನಿ ಮಾಡಿದ್ದಾರೆ. ಜತೆಗೆ ನೂರಾರು ವಾಹನಗಳಿಗೆ ಬೆಂಕಿಯಿಟ್ಟು ಸುಟ್ಟು ಹಾಕಿದ್ದಾರೆ. ಹೀಗಾಗಿ, ಅಲ್ಲಿನ ಸಂತ್ರಸ್ಥರಿಗೆ ಬಿಬಿಎಂಪಿಯಿಂದ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಗೌತಮ್ ಕುಮಾರ್ ಅವರು, ಕೌನ್ಸಿಲ್ ಸಭೆಯಲ್ಲಿ ಗಲಭೆ ವಿಚಾರ ಚರ್ಚೆ ಬೇಡ, ಅದನ್ನು ಸರಕಾರ ತೀರ್ಮಾನ ಮಾಡಲಿದೆ. ಬೇರೆ ಸಮಸ್ಯೆಗಳಿದ್ದರೆ ಚರ್ಚಿಸಬೇಕು ಎಂದು ಸದಸ್ಯರಿಗೆ ಸೂಚನೆ ನೀಡಿ, ಗದ್ದಲದ ವಾತಾವರಣ ಶಮನಗೊಳಿಸಿದರು.
.jpg)







