ದ.ಕ.ಜಿಲ್ಲೆ : 234 ಮಂದಿಗೆ ಕೊರೋನ ಸೋಂಕು, ಕೋವಿಡ್ಗೆ ನಾಲ್ಕು ಬಲಿ
ಮಂಗಳೂರು, ಆ.19: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಬುಧವಾರ ಮತ್ತೆ 234 ಮಂದಿಗೆ ಸೋಂಕು ತಗುಲುವ ಜೊತೆಗೆ ನಾಲ್ವರನ್ನು ಬಲಿ ಪಡೆದಿದೆ.
ಮೃತಪಟ್ಟವರಲ್ಲಿ ಇಬ್ಬರು ಮಂಗಳೂರು ತಾಲೂಕಿನವರಾಗಿದ್ದರೆ, ಇಬ್ಬರು ಹೊರಜಿಲ್ಲೆಯವರು. ಇವರೆಲ್ಲರೂ ಕೊರೋನ ಮಾತ್ರವಲ್ಲದೆ, ಇತರ ಗಂಭೀರ ಕಾಯಿಲೆಗಳಿಂದಲೂ ಬಳಲುತ್ತಿದ್ದರು. ಜಿಲ್ಲೆಯಲ್ಲಿ ಕೋವಿಡ್ಗೆ ಬಲಿಯಾದವರ ಸಂಖ್ಯೆ 290ಕ್ಕೆ ಏರಿದೆ ಎಂದು ಜಿಲ್ಲಾ ಆರೋಗ್ಯ ಬುಲೆಟಿನ್ನಲ್ಲಿ ಮಾಹಿತಿ ನೀಡಲಾಗಿದೆ.
ಜಿಲ್ಲೆಯಲ್ಲಿ ಹೊಸದಾಗಿ 234 ಮಂದಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ. ಈ ಪೈಕಿ ಬಹುತೇಕ 148 ಮಂದಿ ಮಂಗಳೂರಿನವರೇ ಆಗಿದ್ದರೆ, ಬಂಟ್ವಾಳದ 29 ಮಂದಿ, ಪುತ್ತೂರಿನ 14, ಸುಳ್ಯದ 13 ಮಂದಿಗೂ ಸೋಂಕು ತಗುಲಿದ್ದು, ಜಿಲ್ಲೆಯ ವಿವಿಧೆಡೆ ಚಿಕಿತ್ಸೆಯಲ್ಲಿದ್ದಾರೆ.
ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 35 ಮಂದಿಗೆ ಸೋಂಕು ತಗುಲಿದ್ದರೆ, ಶೀತ ಜ್ವರ ಉಸಿರಾಟ ಸಂಬಂಧಿ 122 ಪ್ರಕರಣಗಳು ಪತ್ತೆಯಾ ಗಿವೆ. ಸೋಂಕು ಮೂಲ ಪತ್ತೆಯಾಗದ 76 ಪ್ರಕರಣಗಳಿದ್ದು, ಮಾಹಿತಿ ಸಂಗ್ರಹ ಕಾರ್ಯ ಪ್ರಗತಿಯಲ್ಲಿದೆ. ಹೊರರಾಜ್ಯದ ವ್ಯಕ್ತಿಯೋರ್ವನಿಗೂ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 9,535ಕ್ಕೆ ಏರಿಕೆಯಾಗಿದೆ.
ಬುಧವಾರ ಸೋಂಕಿನಿಂದ ಗುಣಮುಖರಾದ 115 ಮಂದಿಯಲ್ಲಿ 95 ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. 20 ಮಂದಿ ಮಾತ್ರ ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿದ್ದರು. ಆಸ್ಪತ್ರೆಗೆ ಹೋಗದೆಯೂ ಮನೆಯಲ್ಲೇ ಚಿಕಿತ್ಸೆ ಪಡೆದು ದೊಡ್ಡ ಸಂಖ್ಯೆಯಲ್ಲಿ ಸೋಂಕು ಮುಕ್ತರಾಗಿರುವುದು ಆಶಾದಾ ಯಕ ಬೆಳವಣಿಗೆಯೇ ಆಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೊರೋನ ಮುಕ್ತರಾದವರ ಸಂಖ್ಯೆ 6,942ಕ್ಕೆ ಏರಿಕೆಯಾಗಿರುವುದು ಸಾರ್ವಜನಿಕರಲ್ಲಿ ನೆಮ್ಮದಿ ತಂದಿದೆ. ಜಿಲ್ಲೆಯಲ್ಲಿ 2,303 ಸಕ್ರಿಯ ಪ್ರಕರಣಗಳಿವೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.