ಮಂಗಳೂರಿನಲ್ಲಿ ಪ್ಲಾಸ್ಮಾ ಥೆರಪಿ ಕೇಂದ್ರ : ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಮನವಿ
ಮಂಗಳೂರು, ಆ.19: ಕೊರೋನ ಸೋಂಕಿತರ ಚಿಕ್ಸಿತೆಯಲ್ಲಿ ಪ್ಲಾಸ್ಮಾ ಪ್ರಮುಖ ಪಾತ್ರ ವಹಿಸುತ್ತದೆ. ಸೋಂಕಿತರಿಗೆ ಪ್ಲಾಸ್ಮಾ ನೀಡಿದಾಗ ಅವರ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಂಗಳೂರಿನಲ್ಲೂ ಪ್ಲಾಸ್ಮಾ ಥೆರಪಿ ಕೇಂದ್ರ ಆರಂಭಿಸಬೇಕು ಎಂದು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಸಂಘಟನೆ ಮನವಿ ಮಾಡಿದೆ.
ನಗರದ ಪ್ರೆಸ್ಕ್ಲಬ್ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಸಂಚಾಲಕ ಶಂಸುದ್ದೀನ್ ಬಳ್ಕುಂಜೆ, ಕೊರೋನ ಸೋಂಕಿನಿಂದ ಗುಣಮುಖರಾದ ಹಲವು ಮಂದಿ ಜಿಲ್ಲೆಯಲ್ಲಿ ಪ್ಲಾಸ್ಮಾ ದಾನ ಮಾಡಲು ಮುಂದೆ ಬಂದಿದ್ದಾರೆ. ಆದರೆ ಪ್ಲಾಸ್ಮಾ ತೆಗೆಯಲು ಬೆಂಗಳೂರಿಗೆ ಹೋಗಬೇಕಿರುವುದರಿಂದ ಇಚ್ಛೆ ಇರುವ ಎಲ್ಲರಿಗೂ ದಾನ ಮಾಡಲು ಸಾಧ್ಯವಾಗುತ್ತಿಲ್ಲ. ಜಿಲ್ಲಾಡಳಿತ ಶೀಘ್ರದಲ್ಲಿ ಪ್ಲಾಸ್ಮಾ ಥೆರಪಿ ಕೇಂದ್ರವನ್ನು ಆರಂಭಿಸಬೇಕು. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣವೂ ಕಡಿಮೆಯಾಗಲಿದೆ ಎಂದರು.
ಬ್ಲಡ್ ಹೆಲ್ಪ್ ಕೇರ್ ಅಧ್ಯಕ್ಷ ನಝೀರ್ ಹುಸೈನ್, ವ್ಯವಸ್ಥಾಪಕ ನವಾಝ್ ಉಳ್ಳಾಲ, ಟೀಮ್ ವೆಲ್ಫೇರ್ ಉಳ್ಳಾಲ ಅಧ್ಯಕ್ಷ ಶಾಕಿರ್ ಅಹ್ಮದ್, ಮಾಧ್ಯಮ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮಾಸ್ತಿಕಟ್ಟೆ ಉಪಸ್ಥಿತರಿದ್ದರು.
ದೇಹದಿಂದ ಪ್ಲಾಸ್ಮ ತೆಗೆಯುವ ಪ್ರಕ್ರಿಯೆ ರಕ್ತದಾನದಂತೆ. ಓರ್ವ ವ್ಯಕ್ತಿ ಪ್ರತಿ 14 ದಿಗಳಿಗೊಮ್ಮೆ ಪ್ಲಾಸ್ಮಾವನ್ನು ದಾನ ಮಾಡಬಹುದಾಗಿದೆ. ದೇಹದಿಂದ ತೆಗೆಯುವ 500 ಎಂ.ಎಲ್.ಪ್ಲಾಸ್ಮಾವನ್ನು ತಲಾ 250 ಎಂ.ಎಲ್ನಂತೆ ಇಬ್ಬರಿಗೆ ನೀಡಬಹುದಾಗಿದ್ದು, ಇಬ್ಬರ ಜೀವ ಉಳಿಸಿದ ಪುಣ್ಯ ನಮಗೆ ಸಿಗುತ್ತದೆ.
-ಶಾಕಿರ್ ಅಹ್ಮದ್, ಪ್ಲಾಸ್ಮಾ ದಾನಿ