ಮಂಗಳೂರು ಕೇಂದ್ರ ಮಾರುಕಟ್ಟೆ ವ್ಯಾಪಾರ ಸ್ಥಗಿತ: ಜಿಲ್ಲಾಧಿಕಾರಿ ಆದೇಶ ಹಿಂದಕ್ಕೆ ಪಡೆಯಲು ಐವನ್ ಆಗ್ರಹ
ಮಂಗಳೂರು, ಆ.19: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೇಂದ್ರ ಮಾರುಕಟ್ಟೆಯ ವ್ಯಾಪಾರ ಸ್ಥಗಿತಗೊಳಿಸಿದ ಆದೇಶವನ್ನು ಜಿಲ್ಲಾಧಿಕಾರಿ ಹಿಂದಕ್ಕೆ ಪಡೆಯಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಆಗ್ರಹಿಸಿದ್ದಾರೆ.
ಕೇಂದ್ರ ಮಾರುಕಟ್ಟೆಯಲ್ಲಿ ಹಣ್ಣು-ಹಂಪಲು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿರುವವರಿಗೆ ಬದಲಿ ವ್ಯವಸ್ಥೆ ಆಗದೆ ಏಕಾಏಕಿ ಕೋವಿಡ್ ಕಾರಣ ನೀಡಿ, ಎಪಿಎಂಸಿ ಬೈಕಂಪಾಡಿಗೆ ವರ್ಗಾಯಿಸಿರುವುದು ಸಲ್ಲದು. ಅಲ್ಲಿ ಯಾವುದೇ ಮೂಲಭೂತ ಸೌಕರ್ಯವಿಲ್ಲ. ವ್ಯಾಪಾರ ಮಳಿಗೆ ಗಳನ್ನು ಕಾನೂನು ಬದ್ಧವಾಗಿ ಹರಾಜು ಮೂಲಕ ನೀಡದೆ ವ್ಯಾಪಾರಸ್ಥರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಇದರಿಂದ ಗ್ರಾಹಕರಿಗೂ ತೊಂದರೆ ಗೊಳಗಾಗಿದ್ದಾರೆ ಎಂದರು.
ಕಾನೂನು ಸಮರದಲ್ಲಿ ಮತ್ತೆ ಕೋರ್ಟ್ ಆದೇಶದನ್ವಯ ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುವಂತೆ ಆದೇಶ ನೀಡಿದರೂ, ಅದನ್ನು ಕಾರ್ಯಗತಗೊಳಿಸಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಸುವ ಬದಲು ಮತ್ತೆ ಮುಚ್ಚುಗಡೆಗೆ ಆದೇಶ ನೀಡಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವ್ಯಾಪಾರಸ್ಥರನ್ನು ಕೋರ್ಟಿಗೆ ಅಲೆದಾಡುವಂತೆ ಮಾಡುವ ಶಾಸಕರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಕ್ರಮ ಖಂಡನೀಯ. ಈ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಐವನ್ ಡಿಸೋಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.