ಉಡುಪಿ: ಸರಕಾರದ ಮಾರ್ಗಸೂಚಿಯಂತೆ ಗಣೇಶೋತ್ಸವ ಆಚರಣೆಗೆ ನಿರ್ಧಾರ
ಉಡುಪಿ, ಆ.20: ಶ್ರೀಗಣೇಶೋತ್ಸವ ಸಮಿತಿ ಹಾಗೂ ಭಕ್ತ ವೃಂದದವರು ಸತತವಾಗಿ 19 ವರ್ಷಗಳಿಂದ ನಗರದ ಮಾರುತಿ ವೀಥಿಕಾದಲ್ಲಿ ನಡೆಸಿಕೊಂಡು ಬರುತ್ತಿದ್ದ ಗಣೇಶೋತ್ಸವವನ್ನು ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ಬಡಗುಪೇಟೆಯ ಶ್ರೀವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಚರಿಸಲು ನಿರ್ಧರಿಸಲಾಗಿದೆ.
ನಗರದ ಮಾರುತಿ ವಿಥೀಕಾದ ಶಾಮ್ ಕಾಂಪ್ಲೆಕ್ಸ್ನಲ್ಲಿ ಇಂದು ನಡೆದ ಸಮಿತಿಯ ಅಧ್ಯಕ್ಷ ಗುರುರಾಜ್ ಎಂ.ಶೆಟ್ಟಿ ನೇತೃತ್ವದಲ್ಲಿ ನಡೆದ ಗಣೇಶೋತ್ಸವದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಈ ಬಾರಿ ಸರಕಾರ ವಿಧಿಸಿರುವ ಮಾರ್ಗಸೂಚಿಯಂತೆ ಬದಲಾದ ಸ್ಥಳದಲ್ಲಿ ಒಂದು ದಿನದ ಕಾರ್ಯಕ್ರಮದೊಂದಿಗೆ 20ನೇ ವರ್ಷದ ಗಣೇಶೋತ್ಸವನ್ನು ಆಚರಿಸಲಾಗುವುದು. ಅದರಂತೆಯೇ ಸರಳ ರೀತಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಗಣೇಶೋತ್ಸವವನ್ನು ಆಚರಿಸಲಾಗುವುದು ಎಂದು ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣೇಶ್ರಾಜ್ ಸರಳೇ ಬೆಟ್ಟು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





