ಸಾಂತೂರು: ತೋಟಕ್ಕೆ ಬಂದ ಚಿರತೆ ಅರಣ್ಯ ಇಲಾಖೆಯ ಬೋನಿನಲ್ಲಿ ಸೆರೆ
ಪಡುಬಿದ್ರೆ, ಆ.21: ಇಲ್ಲಿಗೆ ಸಮೀಪದ ಸಾಂತೂರಿನ ಮನೆಯೊಂದರ ತೋಟಕ್ಕೆ ಬಂದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ ಬೋನಿಗೆ ಗುರುವಾರ ಮಧ್ಯರಾತ್ರಿ ಬಿದ್ದಿದೆ.
ಸಾಂತೂರು ಹಾಗೂ ಪಲಿಮಾರು ಪರಿಸರದಲ್ಲಿ ಕೆಲವು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಸ್ಥಳೀಯರು ದೂರು ನೀಡಿದ್ದರು. ಸಾಂತೂರಿನ ರವಿ ಶೆಟ್ಟಿ ಎಂಬವರ ಮನೆಯ ತೋಟದಲ್ಲಿ ಚಿರತೆ ಅಡ್ಡಾಡುತ್ತಿರುವ ದೃಶ್ಯ ಅವರ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ಚಿರತೆಯನ್ನು ಹಿಡಿಯಲು ಬೋನು ಇಡಲಾಗಿತ್ತು. ಗುರುವಾರ ತಡರಾತ್ರಿ ಚಿರತೆ ಬೋನಿಗೆ ಬಿದ್ದಿದೆ.
ಶುಕ್ರವಾರ ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಸೆರೆಯಾದ ಹೆಣ್ಣುಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ.
ವಲಯ ಅರಣ್ಯಾಧಿಕಾರಿ ಕ್ಲಿಪರ್ಟ್ ಲೋಬೋ, ಅರಣ್ಯ ಅಧಿಕಾರಿಗಳಾದ ಜೀವನದಾಸ್ ಶೆಟ್ಟಿ , ಗುರುರಾಜ್, ಅಭಿಲಾಶ್ ಜಯರಾಮ ಶೆಟ್ಟಿ, ಮಂಜುನಾಥ್ ನಾಯಕ್, ಪರಶುರಾಮ ಉಪಸ್ಥಿತರಿದ್ದರು
Next Story