ಬಾಳಿಗರ ಕೊಲೆಗಡುಕರನ್ನು ಶಿಕ್ಷಿಸಲು ಹೋರಾಡುತ್ತಿರುವ ಅವರ ಸೋದರಿಯರಿಗೆ ಯಾವಾಗ ನ್ಯಾಯ ಕೊಡಿಸುತ್ತೀರಿ ?
ನಳೀನ್ ಕುಮಾರ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು, ಆ. 21: `ಬುದ್ಧಿವಂತರ ಜಿಲ್ಲೆ ಎಂದ ದಕ್ಷಿಣ ಕನ್ನಡದ ಖ್ಯಾತಿಗೆ ಅಸೂಯೆಪಟ್ಟು ಬಿಜೆಪಿ ವರಿಷ್ಟರು, ನಳೀನ್ ಕುಮಾರ್ ಕಟೀಲ್ ಎಂಬ ನಕಲಿ ಶ್ಯಾಮನನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿರಬಹುದು, ಇಲ್ಲವೇ ಪಕ್ಷದಲ್ಲಿ ಈ ಮಟ್ಟದ ಬೌದ್ಧಿಕ ದಾರಿದ್ರ್ಯ ಇದ್ದಿರಬಹುದು' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧದ ನಳೀನ್ ಕುಮಾರ್ ಕಟೀಲ್ ಟೀಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, `ಹಿಂದು ಧರ್ಮಕ್ಕೆ ಸೇರಿರುವ ಮಂಗಳೂರಿನ ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಹತ್ಯೆಯ ಪ್ರಮುಖ ಆರೋಪಿಯಾದ ನಿಮ್ಮ ಖಾಸಾ ದೋಸ್ತ್ ನರೇಶ್ ಶೆಣೈಯನ್ನು ರಕ್ಷಿಸುತ್ತಿರುವವರು ಯಾರೆಂದು ತಿಳಿಸುವಿರಾ? ಬಾಳಿಗರ ಕೊಲೆಗಡುಕರನ್ನು ಶಿಕ್ಷಿಸಲು ಹೋರಾಡುತ್ತಿರುವ ಅವರ ಸೋದರಿಯರಿಗೆ ಯಾವಾಗ ನ್ಯಾಯ ಕೊಡಿಸುತ್ತೀರಿ?' ಎಂದು ಪ್ರಶ್ನಿಸಿದ್ದಾರೆ.
`ಹಿಂದುಗಳ ಹತ್ಯೆ ಬಗ್ಗೆ ಕಣ್ಣೀರು ಸುರಿಸುತ್ತಿರುವ ನಳೀನ್ ಕುಮಾರ್ ಕಟೀಲ್ ಅವರೇ, ದಕ್ಷಿಣ ಕನ್ನಡದ ಪ್ರಕಾಶ್ ಕುಳಾಯಿ, ಕೇಶವ ಶೆಟ್ಟಿ, ಹರೀಶ್ ಪೂಜಾರಿ, ಬ್ರಹ್ಮಾವರದ ಪ್ರವೀಣ್ ಪೂಜಾರಿ, ಚಿಕ್ಕಮಗಳೂರಿನ ಕಲ್ಲಪ್ಪ ಹಂಡಿಬಾಗ್ ಮತ್ತು ಧನ್ಯಶ್ರೀ ಹಾಗೂ ವಿಜಯಪುರದ ದಾನಮ್ಮ ಹತ್ಯೆಯ ಆರೋಪಿಗಳು ಯಾರೆಂದು ತಿಳಿಸುವಿರಾ?' ಎಂದು ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.
`ಹಿಂದೂಗಳ ಹತ್ಯೆ ಬಗ್ಗೆ ಕಣ್ಣೀರು ಸುರಿಸುತ್ತಿರುವ ನಳೀನ್ ಕುಮಾರ್ ಕಟೀಲ್ ಅವರೇ, ಹೊನ್ನಾವರದ ಪರೇಶ್ ಮೇಸ್ತಾ ಹತ್ಯೆಯ ಪ್ರಕರಣ ತನಿಖೆಯನ್ನು ಸಿಬಿಐ ನಡೆಸುತ್ತಿದೆ, ನಿಮ್ಮ ಪ್ರಭಾವ ಬೀರಿ ಶೀಘ್ರವಾಗಿ ಈ ಹತ್ಯೆಯ ಅಪರಾಧಿಗಳನ್ನು ಪತ್ತೆಹಚ್ಚಿ ಹಿಂದು ಪರೇಶ್ ಮೇಸ್ತನ ಕುಟುಂಬಕ್ಕೆ ನ್ಯಾಯ ಯಾವಾಗ ಕೊಡಿಸುವಿರಿ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
`ನಾನು ಮುಖ್ಯಮಂತ್ರಿಯಾಗಿದ್ದಾಗ ಹತ್ಯೆಗೀಡಾಗಿದ್ದಾರೆಂದು ಆರೋಪಿಸಿ ನಿಮ್ಮ ಪಕ್ಷ ಕೇಂದ್ರ ಸರಕಾರಕ್ಕೆ ಕಳಿಸಿದ್ದ ಪಟ್ಟಿಯಲ್ಲಿ ಜೀವಂತವಾಗಿ ಇರುವ ಅಶೋಕ್ ಪೂಜಾರಿ ಅವರ ಹೆಸರನ್ನು ಸೇರಿಸಿರುವ ನಿಮ್ಮ ಪಕ್ಷ ತನ್ನ ಬಣ್ಣ ತಾನೇ ಬಯಲು ಮಾಡಿಕೊಂಡು ನಗೆಪಾಟಲಿಗೀಡಾಗಿದ್ದು ನೆನಪಿದೆಯೇ ನಳೀನ್ ಕುಮಾರ್ ಕಟೀಲ್?' ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
'2013ರಿಂದ 2018ರ ಅವಧಿಯಲ್ಲಿ ಕೋಮುಸಂಘರ್ಷದಲ್ಲಿ ಹತ್ಯೆಗೀಡಾಗಿದ್ದ 10 ಹಿಂದುಗಳ ಹತ್ಯೆಯ ಆರೋಪಿಗಳು ಎಸ್ ಡಿಪಿಐ, ಪಿಎಫ್ಐ ಸಂಘಟನೆಯವರಾದರೆ, 11 ಮುಸ್ಲಿಮ್ ಮತ್ತು ಹತ್ತು ಹಿಂದುಗಳ ಹತ್ಯೆಯ ಆರೋಪಿಗಳು ಭಜರಂಗದಳ ಮತ್ತು ಹಿಂದು ಜಾಗರಣಾ ವೇದಿಕೆಯವರು. ಈಗ ಹೇಳಿ ಯಾವುದನ್ನು ನಿಷೇಧಿಸುತ್ತೀರಿ?' ಎಂದು ಸಿದ್ದರಾಮಯ್ಯ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
`ನಳೀನ್ ಕುಮಾರ್ ಕಟೀಲ್ ಅವರೇ, ಅವರೇ, 2013ರಿಂದ 18ರ ಅವಧಿಯಲ್ಲಿ 24 ಹಿಂದುಗಳ ಹತ್ಯೆಯಾಗಿದೆ ಎಂದು ಹೇಳಿದ್ದೀರಿ. ಕೋಮುಸಂಘರ್ಷದಲ್ಲಿ ಹತ್ಯೆಗೀಡಾದವರು 24 ಅಲ್ಲ, ಹಿಂದು-ಮುಸ್ಲಿಮ್ ಸೇರಿ ಒಟ್ಟು 45. ಈ ಪ್ರಕರಣಗಳನ್ನು ದಾಖಲೆ ಸಮೇತ ವಿವರಿಸಿ ನಮ್ಮ ಪಕ್ಷ ಪ್ರಕಟಿಸಿದ ಪುಸ್ತಕವನ್ನು ಓದಿ ನಿಮ್ಮ ಮನಃಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ' ಎಂದು ಸಿದ್ದರಾಮಯ್ಯ ವ್ಯಂಗ್ಯ ಸಲಹೆ ನೀಡಿದ್ದಾರೆ.
.@nalinkateel ಅವರೇ, 2013-18ರ ಅವಧಿಯಲ್ಲಿ 24 ಹಿಂದುಗಳ ಹತ್ಯೆಯಾಗಿದೆ ಎಂದು ಹೇಳಿದ್ದೀರಿ. ಕೋಮುಸಂಘರ್ಷದಲ್ಲಿ ಹತ್ಯೆಗೀಡಾದವರು 24 ಅಲ್ಲ, ಹಿಂದು-ಮುಸ್ಲಿಮ್ ಸೇರಿ ಒಟ್ಟು 45.
— Siddaramaiah (@siddaramaiah) August 21, 2020
ಈ ಪ್ರಕರಣಗಳನ್ನು ದಾಖಲೆ ಸಮೇತ ವಿವರಿಸಿ ನಮ್ಮ ಪಕ್ಷ ಪ್ರಕಟಿಸಿದ ಪುಸ್ತಕವನ್ನು ಓದಿ ನಿಮ್ಮ ಮನಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ.
1/7 pic.twitter.com/Cthx6wI5dK







