ಮುಂಬೈಯ ಜೈನ ದೇವಾಲಯಗಳಲ್ಲಿ ಪರ್ಯೂಶನ ಪ್ರಾರ್ಥನೆ ಸಲ್ಲಿಸಲು ಸುಪ್ರೀಂ ಕೋರ್ಟ್ ಅನುಮತಿ

ಹೊಸದಿಲ್ಲಿ, ಆ. 21: ಕೊರೋನ ವೈರಸ್ ಸೋಂಕಿನ ನಡುವೆ ಮುಂಬೈಯಲ್ಲಿರುವ ಮೂರು ಜೈನ ದೇವಾಲಯಗಳಲ್ಲಿ ಪರ್ಯೂಶನ ಪ್ರಾರ್ಥನೆ ನಡೆಸಲು ಸುಪ್ರೀಂ ಕೋರ್ಟ್ ಜೈನ ಸಮುದಾಯಕ್ಕೆ ಶುಕ್ರವಾರ ಅನುಮತಿ ನೀಡಿದೆ.
ದಾದರ್, ಬಯಕಲಾ ಹಾಗೂ ಚೆಂಬೂರ್ನಲ್ಲಿರುವ ಜೈನ ದೇವಾಲಯಕ್ಕೆ ಭೇಟಿ ನೀಡಲು ಜೈನ ಸಮುದಾಯದವರಿಗೆ ಅನುಮತಿ ನೀಡಿರುವ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಸುಪ್ರೀಂ ಕೋರ್ಟ್ನ ಪೀಠ, ದೂರುದಾರರು ಗುಣಮಟ್ಟದ ಕಾರ್ಯಾಚರಣೆ ವಿಧಾನ ಅನುಸರಿಸಬೇಕು ಎಂದು ನಿರ್ದೇಶಿಸಿದೆ. ಮುಂಬೈಯ ಇತರ ಯಾವುದೇ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡುವುದಿಲ್ಲ ಎಂದು ಪೀಠ ತಿಳಿಸಿದೆ.
ಕೊರೋನ ಪಿಡುಗಿನ ನಡುವೆ ಆಗಸ್ಟ್ 15ರಿಂದ 25ರ ವರೆಗೆ 8 ದಿನಗಳ ಕಾಲ ನಡೆಯಲಿರುವ ಪರ್ಯೂಶನ್ ಉತ್ಸವದ ಸಂದರ್ಭ ಮುಂಬೈಯಲ್ಲಿರುವ ಜೈನ ದೇವಾಲಯಕ್ಕೆ ಭೇಟಿ ನೀಡಲು ಭಕ್ತರಿಗೆ ಅವಕಾಶ ನೀಡದಿರುವ ರಾಜ್ಯ ಸರಕಾರದ ನಿರ್ಧಾರದಲ್ಲಿ ಹಸ್ತಕ್ಷೇಪ ನಡೆಸಲು ತಾನು ಬಯಸುವುದಿಲ್ಲ ಎಂಬ ಬಾಂಬೆ ಉಚ್ಚ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನಡೆಸಿತು.





